ಬೆಂಗಳೂರು: ಒಳ್ಳೆತನದಲ್ಲಿ ಅಪ್ಪು ಸರ್ ಯಾವಾಗಲೂ ಜೀವಂತವಾಗಿರುತ್ತಾರೆ ಎಂದು ನಿರೂಪಕಿ ಅನುಶ್ರೀ, ಪುನೀತ್ ರಾಜ್ಕುಮಾರ್ ಅವರ 50ನೇ ಹುಟ್ಟುಹಬ್ಬದ ದಿನದಂದು ಅವರನ್ನು ಸ್ಮರಿಸಿದ್ದಾರೆ.
ನಗರದ ಕಂಠೀರವ ಸ್ಟುಡೀಯೊದಲ್ಲಿನ ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿದ ಅನುಶ್ರೀ, ನಮ್ರತಾ ಗೌಡ, ಬಿಗ್ಬಾಸ್ ಸ್ಪರ್ಧಿ ರಂಜಿತ್ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ದಿನದಿಂದ ದಿನಕ್ಕೆ ಅಪ್ಪು ಸರ್ಗೆ ಅಭಿಮಾನಿಗಳು ಜಾಸ್ತಿಯಾಗುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬದ ದಿನದಂದು ಸ್ಮಾರಕಕ್ಕೆ ಜಾತ್ರೆ ಹಾಗೇ ಜನ ಸೇರುತ್ತಿದ್ದಾರೆ. ಲಕ್ಷಾಂತರ ಜನ ಅವರ ಹೆಸರನ್ನು ಕೂಗೋ ರೀತಿ ನೋಡಿದ್ರೆ ನಿಜಕ್ಕೂ ಅಪ್ಪು ಸರ್ ಇದನ್ನೆಲ್ಲಾ ಕೇಳಿಸಿಕೊಳ್ತಾರೆ ಎಂದಿದ್ದಾರೆ.
ಸುಖದಲ್ಲಿ ತುಂಬಾ ಜನ ನಿಮ್ಮೊಂದಿಗೆ ಬಂದು ನಿಲ್ಲಬಹುದು. ಆದರೆ, ಕಷ್ಟದಲ್ಲಿ ನಿಮ್ಮೊಂದಿಗೆ ನಿಲ್ಲುವವರೇ ನಿಜವಾದ ಹೀರೋ. ನನ್ನೊಂದಿಗೆ ಕಷ್ಟದಲ್ಲಿ ನಿಂತಿದ್ದು ಅಪ್ಪು ಸರ್. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದರು.





