Mysore
20
overcast clouds
Light
Dark

ದರ್ಶನ್‌ ಸರ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ನಟ ರಾಜ್‌ ಬಿ ಶೆಟ್ಟಿ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ ಬಗ್ಗೆ ಒಂದು ಮೊಟ್ಟೆಯ ಕಥೆ ಚಿತ್ರದ ಹೀರೋ ರಾಜ್‌ ಬಿ ಶೆಟ್ಟಿ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ.

ದರ್ಶನ್‌ ಪರ ವಿರೋಧ ಹಲವಾರು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ನಟ ರಾಜ್‌ ಬಿ ಶೆಟ್ಟಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಭಾಗಿಯಾಗಿದ್ದೂ ನಿಜವೇ ಆಗಿದ್ದಲ್ಲಿ, ಅವರಿಗೆ ಶಿಕ್ಷೆಯಾಗಲಿ. ಶಿಕ್ಷೆ ಮುಗಿದ ಬಳಿಕ ಅವರು ಹೊಸ ವ್ಯಕ್ತಿಯಾಗಿ ಆಚೆ ಬರಲಿ ಎಂದು ರಾಜ್‌ ಬಿ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಸಿನಿಮಾ ಜನ ಎಂದರೆ ಯಾರೂ ಹೆಣ್ಣು ಕೊಡುವುದಿಲ್ಲ, ಮನೆ ಬಾಡಿಗೆಗೆ ಕೊಡುವುದಿಲ್ಲ ಇಂತಹ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದಿರುವುದು ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ. ಕಾನೂನಿನಡಿ ಎಲ್ಲರಿಗೂ ಸಮಾನ ನ್ಯಾಯ ಸಿಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಈ ಪ್ರಕರಣದಲ್ಲಿ ದರ್ಶನ್‌ ಅವರು ತಪ್ಪು ಮಾಡಿಲ್ಲ ಎಂದಾದರೇ ಅವರು ರಿಲೀಸ್‌ ಆಗುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ದರ್ಶನ್‌ ಅವರ ಪ್ರಕರಣದಿಂದ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದು ನಮ್ಮ ಇಮೇಜ್‌ಗೂ ಡ್ಯಾಮೇಜ್‌ ಮಾಡಿದೆ. ಚಿತ್ರರಂಗ ಒಂದು ಕುಟುಂಬದಂತೆ ಇದ್ದು, ಇಲ್ಲಿ ಎಲ್ಲರೂ ಸಂಬಂಧಿಕರೇ ಆಗಿದ್ದಾರೆ. ಕೆಜಿಎಫ್‌ ನಂತಹ ಉತ್ತಮ ಸಿನಿಮಾ ಬಂದಾಗ ನಮಗೆ ಹೇಗೆ ಹೆಮ್ಮೆ ಎನಿಸುತ್ತದೆಯೋ ಹಾಗೆಯೇ ಇಂತಹ ಘಟನೆಗಳು ನಡೆದಾಗ ನಾವು ಒಗ್ಗಟ್ಟಾಗಿಯೇ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.