ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಜೈಲು ಸಿಬ್ಬಂದಿಗೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ.
ಇಷ್ಟು ದಿನ ಟಿವಿ ಸಹವಾಸವೇ ಬೇಡ ಎಂದು ಕೈ ಮುಗಿಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಟಿವಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.
ಚಾರ್ಜ್ಶೀಟ್ ಸಲ್ಲಿಕೆ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ದರ್ಶನ್ ಟಿವಿ ಮೊರೆ ಹೋಗಿದ್ದಾರೆ ಎನ್ನಲಾಗಿದ್ದು, ಜೈಲು ಸಿಬ್ಬಂದಿ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ದರ್ಶನ್ ಇರಿಸಿರುವ ಹೈ ಸೆಕ್ಯೂರಿಟಿ ಸೆಲ್ ಬಳಿ ಸಿಬ್ಬಂದಿ ತಿಂಡಿ ಕೊಡಲು ಹೋಗಿದ್ದಾಗ ಚಾರ್ಜ್ಶೀಟ್ ವಿಚಾರದ ಬಗ್ಗೆ ಪದೇ ಪದೇ ಕೇಳುತ್ತಿದ್ದರು ಎನ್ನಲಾಗಿದೆ.
ಚಾರ್ಜ್ಶೀಟ್ ಬಗ್ಗೆ ಏನೂ ಮಾಹಿತಿ ಸಿಗದೇ ಇದ್ದಾಗ ಬೇಸರಗೊಂಡ ದರ್ಶನ್, ಜೈಲು ಸಿಬ್ಬಂದಿ ಮಧ್ಯಾಹ್ನದ ಊಟ ಕೊಡಲು ಹೋದಾಗ ಟಿವಿ ಬಗ್ಗೆ ವಿಚಾರಿಸಿದ್ದಾರೆ.
ಟಿವಿ ಬೇಕು ಎನ್ನುವುದಾದರೆ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ ಟಿವಿ ಬೇಕು ಎಂದು ದರ್ಶನ್ ಅವರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





