ಅಲೆದಾಡುತ್ತ ಹೋದ ಅಪ್ಪ, ತನಗೆ ಕೆಲಸ ಕೊಟ್ಟ ಮಾಲೀಕನ ಮಗಳನ್ನು ಪ್ರೀತಿಸಿ ಮದುವೆಯಾಗಿ ಕರೆದುಕೊಂಡು ತನ್ನೂರಿಗೆ ಮರಳಿದನು. ಅವನ ಹಿಂದೆ ತನ್ನ ಮಡದಿಯ ಅರ್ಥಾತ್ ನನ್ನಮ್ಮನ ಎಳೆವಯಸ್ಸಿನ ತಮ್ಮಂದಿರನ್ನೂ ತಂಗಿಯರನ್ನೂ ಕರೆತಂದನು. ನನ್ನ ಸೋದರ ಮಾವಂದಿರು ಮದುವೆಯಾಗಿ, ಕ್ರಮೇಣ ಸ್ವತಂತ್ರರಾಗಿ ಹೊರಗೆ ಹೋದರು. ಆದರೆ, ದೊಡ್ಡಮಾಮ ಮಾತ್ರ ನಮ್ಮಲ್ಲೇ ಬಹುಕಾಲ ಉಳಿದಿದ್ದರು. ಅವರ ಹೆಸರು ರಶೀದ್. ಕೆಂಪಗಿದ್ದರಿಂದ ಲಾಲ್ಮಾಮ ಎಂದು ಕರೆಯುತ್ತಿದ್ದೆವು.
ರಶೀದ್ ಮಾಮ ತೆಳ್ಳಗೆ, ಕುಳ್ಳಗೆ ಬಿಲ್ಲಿನಂತಿದ್ದನು. ಶ್ರಮಜೀವಿ. ಸಿಟ್ಟಿನ ಸಿಪಾಯಿ. ಕೆರಳಿದಾಗ ಕರಕರ ಹಲ್ಲು ಕಡಿಯುತ್ತಿದ್ದನು. ಮುಖ ಟೊಮೊಟೊ ಹಣ್ಣಾಗುತ್ತಿತ್ತು. ಅವನಿಗೆ ನಾವೆಲ್ಲ ಹೆದರುತ್ತಿದ್ದೆವು. ಆದರೂ, ರಶೀದ್ ಮಾಮ ನಮಗೆ ಪ್ರಿಯ. ಆತ ತಾನು ಕಂಡ ದೆವ್ವಗಳ ಕತೆಗಳನ್ನು ನಿರೂಪಿಸುತ್ತಿದ್ದನು. ನಮ್ಮ ಹಳ್ಳಿಯಿಂದ ತರೀಕೆರೆ ಪಟ್ಟಣಕ್ಕೆ ಹೋಗುವವರು ಹಳ್ಳವೊಂದನ್ನು ದಾಟಬೇಕಿತ್ತು. ಅಲ್ಲಿ ದೆವ್ವಗಳು ಅವನನ್ನು ಭೇಟಿಯಾಗುತ್ತಿದ್ದವಂತೆ. ಅವನ ಕತೆಗಳ ಪರಿಣಾಮದಿಂದ ನಮಗೆ ಜಗತ್ತಿನ ಎಲ್ಲ ಹಳ್ಳಗಳೂ ಭಯೋತ್ಪಾದಕ ಎನಿಸಿದವು.
ತರೀಕೆರೆಯಲ್ಲಿ ಸದಾ ನಿರ್ಜನವಾಗಿರುತ್ತಿದ್ದ ಕೆರೆಕೋಡಿಯ ಹಳ್ಳ ಮತ್ತು ಖಬರಸ್ಥಾನದ ನಡುವಣ ಪುರಾತನ ಅರಳೀಮರಗಳಿದ್ದ ಹಾದಿಯಲ್ಲಿ ನಾವು ಓಡಾಡಬೇಕಿತ್ತು. ಆಗ ಅಂಗೈಯಲ್ಲಿ ಜೀವ ಹಿಡಿದುಕೊಂಡು, ಕುರಾನಿನ ಮಂತ್ರಗಳನ್ನು ಪಠಿಸುತ್ತ ಅದನ್ನು ದಾಟುತ್ತಿದ್ದೆವು. ಮುನೇಶ್ವರನು ನಡುರಾತ್ರಿ ಅಲ್ಲಿಂದ ಒಂದು ಹೆಜ್ಜೆ ಕಿತ್ತಿಟ್ಟರೆ ಇನ್ನೊಂದು ಹೆಜ್ಜೆಯನ್ನು ಸ್ಮಶಾನದಲ್ಲಿರುವ ಅರಳಿಮರದ ಮೇಲೆ ಇಡುತ್ತಾನೆಂದೂ ಅವನ ಸಂಚಾರ ನಾಯಿಗಳಿಗೆ ಮಾತ್ರ ಕಾಣುವುದರಿಂದ ಅವು ರಾತ್ರಿ ಊಳಿಡುತ್ತವೆಯೆಂದೂ ಮಾಮ ಹೇಳುತ್ತಿದ್ದನು. ಮಾಮನಿಗೆ ಭೂತ ಪಿಶಾಚಿಗಳಲ್ಲಿ ಮಾತ್ರವಲ್ಲದೆ ಮಾಟ ಮಂತ್ರಗಳಲ್ಲೂ ನಂಬಿಕೆಯಿತ್ತು. ಅವನಿಗೂ ಅಪ್ಪನಿಗೂ ಯಾವುದೋ ಮಾತಿಗೆ ಜಗಳವಾಯಿತು. ಮಾಮನು ನಮ್ಮ ಮನೆ ಬಿಟ್ಟು ಬೇರೆಡೆಗೆ ಹೋದನ. ಅವನ ಕುಟುಂಬದ ಕಷ್ಟಗಳಿಗೆ ಅಪ್ಪ ಮಾಡಿಸಿದ ಮಾಟವೇ ಕಾರಣವೆಂದು ಕೊನೆತನಕ ಹಗೆ ಸಾಧಿಸಿದನು.
ರಶೀದ್ ಮಾಮನಿಗೆ ಅಮ್ಮನಂತೆ ಸೆಡವು, ಕಠೋರತೆ, ಹಟಮಾರಿತನ ಇದ್ದಿತ್ತು. ಸಣ್ಣ ಮಾತಿಗೂ ಇಪ್ಪತ್ತು ಮೂವತ್ತು ವರ್ಷ ಮಾತುಕತೆಯಿಲ್ಲದೆ ಮುಖ ಹರಿದುಕೊಂಡು ಬದುಕುತ್ತಿದ್ದನು. ಅವನದು ವ್ಯಂಗ್ಯ ವಿಡಂಬನೆಗಳಿಂದ ಹರಿತಗೊಂಡ ಚಾಕುನಾಲಗೆ. ಎಲ್ಲರೂ ಅವನ ಜತೆ ಮಾತುಕತೆ ತಪ್ಪಿಸುತ್ತಿದ್ದರು. ಮಾತಾಡಲೇಬೇಕಾದರೆ ತೂಕಮಾಡಿ ಹುಷಾರಿಯಾಗಿ ಮಾತಾಡುತ್ತಿದ್ದರು. ಮುಖಮುರಿದು ಮಾತಾಡುವುದು ಅವನ ಆಜನ್ಮ ಸ್ವಭಾವ. ಇಂತಹ ಬೆಂಕಿ ನವಾಬನಿಗೆ ಸಿಕ್ಕ ಹೆಂಡತಿ, ತಾಯಿ ಹೃದಯದ ಶಾಂತಾದೇವಿ. ರುಚಿಕರ ಅಡುಗೆಗೂ ಬಂದವರ ಉಪಚಾರಕ್ಕೂ ಖ್ಯಾತೆ. ಮಾಮನಿಂದ ಬೇಸರವಾದರೂ ವಾತ್ಸಲ್ಯಮಯಿಯಾದ ಮಾಮಿಯ ಕಾರಣಕ್ಕಾಗಿ ನಾವು, ಆತನಿಲ್ಲ್ಲದ ವೇಳೆ ನೋಡಿಕೊಂಡು ಮನೆಗೆ ಹೋಗುತ್ತಿದ್ದೆವು. ಸಿಡಿಲಿನ ಜತೆ ನೀವಾಗಿದ್ದರಿಂದ ಬದುಕಿದಿರಿ ಎಂದು ಪ್ರಶಸ್ತಿ ಪತ್ರ ನೀಡುತ್ತಿದ್ದೆವು.
ಕೊನೆಗಾಲದಲ್ಲಿ ಮಹಾಧಾರ್ಮಿಕ ಮನುಷ್ಯನಾದ ರಶೀದ್ ಮಾಮ, ತನ್ನ ಪ್ರಾಯದಲ್ಲಿ ಸಿನಿಮಾ ವ್ಯಸನಿಯಾಗಿದ್ದನು. ಸಿನಿಮಾ ಸನ್ನಿವೇಶ ಮತ್ತು ಸಂಭಾಷಣೆಗಳನ್ನು ಸುಭಾಷಿತಗಳಂತೆ ಮಾತಲ್ಲಿ ಬೆರೆಸಿ ಮಾತಾಡುತ್ತಿದ್ದನು. ನಾನು ಕಾಲೇಜು ಕಲಿತು ನೌಕರಿ ಮಾಡುವಾಗ, ‘ನೀನು ಸನಾದಿ ಅಪ್ಪಣ್ಣನಿಗೆ ಅವನ ಮಗ ಮಾಡುವಂತೆ ಅಪ್ಪನಿಗೆ ಕೆಲಸದಾಳಾಗಿ ಮಾಡುತ್ತೀಯ’ ಎಂದು ಭವಿಷ್ಯ ನುಡಿದಿದ್ದನು. ಎಳವೆಯಲ್ಲಿ ಭಯಾನಕವಾಗಿ ಕಾಯಿಲೆಬಿದ್ದ ನನ್ನನ್ನು ಜೋಪಾನ ಮಾಡಿದ್ದರಿಂದ, ನನ್ನ ಮೇಲೆ ಅವನಿಗೆ ವಿಚಿತ್ರ ಹಕ್ಕು ಸಾಧನೆಯಿತ್ತು. ಇಂತಹ ಕತ್ತಿಯಂತಹ ಮನುಷ್ಯನ ಜತೆ ಒಮ್ಮೆ ನಾನು ಎಚ್ಚರಗೇಡಿಯಾಗಿ ವ್ಯವಹರಿಸಿದೆ. ಲಗ್ನಪತ್ರಿಕೆ ಕೊಡಲು ಮನೆಗೆ ಹೋದೆ. ಮಾಮಿ ‘ಅವರಿಗೊಂದು ಮಾತು ಹೇಳಬೇಕಿತ್ತಪ್ಪ’ಎಂದು ಸೂಚ್ಯವಾಗಿ ಹೇಳಿದರು. ಮದುವೆಯಾಗುವ ಉಮೇದಿನಲ್ಲಿದ್ದ ನಾನು ಸೂಚನೆಯನ್ನು ಸರಿಯಾಗಿ ಗ್ರಹಿಸಲಿಲ್ಲ. ಮದುವೆಗೆ ಎರಡು ದಿನವಿತ್ತು. ಮಾಮ ರಸ್ತೆಯಲ್ಲಿ ಸಿಕ್ಕನು. ‘ಮಾಮಾ ಮನೆಗೆ ಹೋಗಿದ್ದೆ. ನೀವಿರಲಿಲ್ಲ. ಮದುವೆಗೆ ಬರಬೇಕು’ಎಂದೆ. ಸರಿ ಎಂದು ವ್ಯಂಗ್ಯವಾಗಿ ನಕ್ಕು ಮುಂದೆ ಹೋದರು. ಆಗಲಾದರೂ ನನಗೆ ವ್ಯಂಗ್ಯವನ್ನು ಓದಲು ಸಾಧ್ಯವಾಗಲಿಲ್ಲ. ವಿವಾಹಾತುರಾಣಾಂ ನಸೂಕ್ಷ ಂ.
ಅವರು ಮದುವೆಗೆಂದು ಏರ್ಪಾಟು ಮಾಡಿದ್ದ ವಾಹನದಲ್ಲಿ ಬರಲಿಲ್ಲ. ‘ನಾನು ನನ್ನ ದುಡ್ಡಲ್ಲೇ ಚಾರ್ಜು ಹಾಕಿಕೊಂಡು ಬಸ್ಸಲ್ಲಿ ಬರ್ತೇನಪ್ಪ’ ಎಂದರು. ಹಾಗೆಯೇ ಬಂದರು ಕೂಡ. ಆದರೆ ನಿಕಾ ನಡೆಯುವಾಗ ಶಾಮಿಯಾನದೊಳಗೆ ಬರದೆ ಹೊರಗೆ ನನಗೆ ಕಾಣುವಂತೆ ಬಿಸಿಲಲ್ಲಿ ನಿಂತಿದ್ದರು. ಯಾರೊ ಹೋಗಿ ಒಳಗೆ ಕರೆಯಲು ‘ಅವನು ನನಗೆ ಬೀದಿಯಲ್ಲಿ ಮದುವೆಗೆ ಆಹ್ವಾನ ಕೊಟ್ಟಿದ್ದಾನೆ, ಆದ್ದರಿಂದ ಬೀದಿಯಲ್ಲೇ ನಿಂತು ನಿಕಾ ನೋಡ್ತೀನಿ’ ಎಂದರಂತೆ. ಇದಾದರೂ ನನಗೆ ತಿಳಿದಿದ್ದು ಮದುವೆಯಾದ ಎರಡು ದಿನಗಳ ಬಳಿಕ. ವೇದಿಕೆಯ ಮೇಲಿದ್ದ ನನಗೆ ಮಾಮ ಬಯಲಿನಲ್ಲಿ ಧರಣಿ ನಿಂತಿರುವುದು ಕಂಡಿತು. ‘ಎಲ್ಲೊ ಎಡವಟ್ಟಾಗಿದೆ’ ಎಂದು ಊಹಿಸಿದೆ. ಆರನೆಯ ಇಂದ್ರಿಯ ಹೆಚ್ಚಿನ ಅಪಾಯಕ್ಕೆ ಎಡೆಗೊಡಬೇಡ. ಕೂಡಲೇ ಕಾರ್ಯಾಚರಣೆ ಮಾಡು ಎಂದು ಸೂಚಿಸಿತು. ನಿಖಾ ಪುಸ್ತಕಕ್ಕೆ ಸಹಿ ಮಾಡಿದವನೇ ನನಗೆ ಕೈಮಿಲಾಯಿಸಲು ಸರತಿ ಸಾಲಲ್ಲಿ ನಿಂತಿದ್ದ ಗೆಳೆಯರನ್ನು ನಿವಾರಿಸಿ, ಬಯಲಲ್ಲಿ ನಿಂತ ಮಾಮನಿಗೆ ಹೋಗಿ ಮೊದಲ ಅಪ್ಪುಗೆ ಕೆಟ್ಟೆ. ಅವರಿಗೆ ತಮಗೆ ಸಿಕ್ಕ ಅಗ್ರ ಮರ್ಯಾದೆಯಿಂದ ಬಹಳ ಸಂತೋಷವಾಯಿತು. ಎಷ್ಟಾದರೂ ನಾನು ಸಾಕಿದ ಹುಡುಗ, ಕಣ್ಣರಿಯದಿರ್ದೊಡೆ ಕರುಳರಿಯದೆ ಎಂದರಂತೆ. ಕೈಹಿಡಿದು ಶಾಮಿಯಾನದೊಳಗೆ ಕರೆತಂದೆ. ಬಿಸಿಲಲ್ಲಿ ದಣಿದಿದ್ದ ಹಿರಿಯ ಜೀವ ಕುರ್ಚಿಯಲ್ಲಿ ಕುಳಿತು ವಿಶ್ರಮಿಸಿಕೊಂಡಿತು. ಹೊಟ್ಟೆತುಂಬ ಊಟ ಮಾಡಿತು.
ಆದರೆ ನಾನು ಸನಾದಿ ಅಪ್ಪಣ್ಣನ ಮಗನಂತೆ ನನ್ನ ಅಪ್ಪನ ಜತೆ ನಡೆದುಕೊಳ್ಳುವ ಅವರ ಭವಿಷ್ಯವಾಣಿ ನಿಜವಾಯಿತೇ ಇಲ್ಲವೇ ಕೊನೆಗೂ ತಿಳಿಯಲಿಲ್ಲ. ವಿಚಾರಿಸೋಣವೆಂದರೆ ಅಪ್ಪನೂ ಇಲ್ಲ. ಮಾಮನೂ ಇಲ್ಲ.





