Mysore
20
overcast clouds
Light
Dark

ಸಂಪಾದಕೀಯ: ಕೊಡಗಿನ ವಲಸೆ ಕಾರ್ಮಿಕರ ಮಕ್ಕಳಿಗೂ ಶಿಕ್ಷಣ ದೊರಕಲಿ

ಉದ್ಯೋಗವನ್ನರಸಿ ಹೊರ ರಾಜ್ಯಗಳಿಂದ ಸಾವಿರಾರು ಕುಟುಂಬಗಳು ವಿವಿಧ ಕೆಲಸಗಳನ್ನು ನಿರ್ವಹಿಸಿಕೊಂಡು ಜೀವನ ನಡೆಸುತ್ತಿವೆ. ಹೀಗೆ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಅಸ್ಸಾಂ, ಬಂಗಾಳ, ಒರಿಸ್ಸಾ ಸೇರಿದಂತೆ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಬಹುತೇಕ ಕಾರ್ಮಿಕರಿಗೆ ಕನ್ನಡ ಭಾಷೆಯೇ ತಿಳಿದಿಲ್ಲ. ಈ ಕಾರ್ಮಿಕರ ಮಕ್ಕಳಿಗೂ ಇದೇ ಸಮಸ್ಯೆಯಾಗಿದ್ದು, ಭಾಷೆ ಸಮಸ್ಯೆಯಿಂದ ಕಾರ್ಮಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಕಾರ್ಮಿಕರು ಹೊಟ್ಟೆಪಾಡಿಗಾಗಿ ತಮ್ಮ ಊರನ್ನು ಬಿಟ್ಟು ಬಂದು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯ ಕಾರ್ಮಿಕರ ಕೊರತೆ ಕೂಡ ನಿವಾರಣೆಯಾಗುತ್ತಿದೆ. ಆದರೆ, ಕಾರ್ಮಿಕರು ದಿನವಿಡೀ ಕಾಫಿ ತೋಟಗಳಲ್ಲಿ ದಿನಕಳೆದರೆ ಮಕ್ಕಳು ಲೈನ್ ಮನೆಗಳ ಆವರಣದಲ್ಲಿ ಆಟವಾಡುತ್ತಾ ದಿನ ಕಳೆಯುತ್ತಿದ್ದಾರೆ. ತಮ್ಮದೇ ಭಾಷೆಯೊಂದನ್ನು ಕಳಿತಿರುವುದನ್ನು ಬಿಟ್ಟರೆ ಪ್ರಾಪಂಚಿಕ ವ್ಯವಹಾರದ ಜ್ಞಾನವನ್ನು ಪಡೆಯಲು ಮಕ್ಕಳು ವಿಫಲವಾಗುತ್ತಿದ್ದಾರೆ.
ಜಿಲ್ಲೆಯ ಟಾಟಾ ಎಸ್ಟೇಟ್, ಬಿಬಿಟಿಸಿ ಸೇರಿದಂತೆ ಸಾಕಷ್ಟು ಖಾಸಗಿ ತೋಟಗಳಲ್ಲಿ ಬೆವರು ಹರಿಸುತ್ತಿರುವ ಕುಟುಂಬಗಳಲ್ಲಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತೋಟದ ಮ್ಯಾನೇಜ್ಮೆಂಟ್‌ಗಳು, ಮಾಲೀಕರು ನಿಗಾ ವಹಿಸದೆ ಇರುವುದು ಒಂದೆಡೆಯಾದರೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಈ ಬಗ್ಗೆ ಗಮನವೇ ಹರಿಸುತ್ತಿಲ್ಲ. ಶೈಕ್ಷಣಿಕ ಪ್ರಗತಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೆಲೆವೆಡೆ ಪ್ರಯೋಜನವೇ ಆಗುತ್ತಿಲ್ಲ ಎಂಬುವುದಕ್ಕೆ ಇದೊಂದು ಉದಾಹರಣೆ.
ಮೂಲಭೂತ ಹಕ್ಕುಗಳಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ವಲಸೆ ಕಾರ್ಮಿಕರ ಮಕ್ಕಳ ಅನುಕೂಲಕ್ಕೆ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಯೋಜನೆಯನ್ನು ರೂಪಿಸಿದ್ದರೂ ಈ ಬಗ್ಗೆ ಕಾರ್ಮಿಕರಿಗೆ ಯಾವುದೇ ಮಾಹಿತಿ ಇಲ್ಲ. ಎಐಟಿಯುಸಿ ಕಾರ್ಮಿಕ ಸಂಘಟನೆ ನಡೆಸಿದ ಸಮೀಕ್ಷೆ ಪ್ರಕಾರ ಟಾಟಾ ಕಂಪನಿಯಲ್ಲಿ ಸುಮಾರು ೩೦೦ಕ್ಕೂ ಅಧಿಕ ಕುಟುಂಬಗಳು ದುಡಿಯುತ್ತಿದೆ. ಈ ಕುಟುಂಬಗಳ ೫೦೦ಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಲ್ಲದೆ ಖಾಸಗಿ ತೋಟಗಳ ಸುಮಾರು ೭೬ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಬಿಬಿಟಿಸಿ ಎಸ್ಟೇಟ್‌ನಲ್ಲಿ ೮ ಡಿವಿಷನ್‌ಗಳಲ್ಲಿ ಸುಮಾರು ೧೩೦ ವಲಸೆ ಕಾರ್ಮಿಕರ ಕುಟುಂಬ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಸುಮಾರು ೪೭ ಮಕ್ಕಳು ಶಾಲೆಗೆ ಹೋಗದೆ ಎಸ್ಟೇಟ್‌ನಲ್ಲಿ ಆಟವಾಡುತ್ತ ಕಾಲ ಕಳೆಯುತ್ತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ತೋಟಗಳಲ್ಲಿ ಕಾರ್ಮಿಕರ ಮಕ್ಕಳು ಶಾಲೆಗೆ ಹೋಗದೆ ಉಳಿದರೆ ಅಂತಹ ಮಾಲೀಕರು, ಮ್ಯಾನೇಜ್‌ಮೆಂಟ್‌ಗಳ ವಿರುದ್ದ ಬಾಲಕಾರ್ಮಿಕ ಕಾಯಿದೆಯ ಪ್ರಕಾರ ಮೊಕದ್ದಮೆ ದಾಖಲಿಸಿ ದಂಡದ ಜೊತೆಗೆ ಜಾಮಿನು ರಹಿತ ಜೈಲು ಶಿಕ್ಷೆ ಜಾರಿ ಮಾಡಬೇಕು. ಈಗಾದಲ್ಲಿ ಕಂಪನಿ ಮ್ಯಾನೇಜ್‌ಮೆಂಟ್ ಹಾಗೂ ಮಾಲೀಕರೇ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗುತ್ತಾರೆ. ಆ ಮೂಲಕ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಅದೆಷ್ಟೋ ಯೋಜನೆಗಳನ್ನು ಜಾರಿಗೆ ತಂದಿವೆಯಾದರೂ ಮಕ್ಕಳ ಕೊರತೆಯಿಂದ ಸರಕಾರಿ ಶಾಲೆಗಳನ್ನು ಮುಚ್ಚುವ ಅಂತ ತಲುಪಿದೆ. ವಲಸೆ ಕಾರ್ಮಿಕರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ನೀಡುವುದರಿಂದ ಸರ್ಕಾರಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಕೊರತೆ ಕೂಡ ನಿವಾರಣೆಯಾಗಲಿದೆ. ಆದ್ದರಿಂದ ಶಿಕ್ಷಣ ಇಲಾಖೆ ಕೂಡ ಮಕ್ಕಳನ್ನು ಶಾಲೆಗೆ ಕರೆತಂದು ಶಿಕ್ಷಣ ಕೊಡಿಸಲು ಪ್ರಯತ್ನಿಸಬೇಕು. ಗ್ರಾಮ ಪಂಚಾಯಿತಿ ಸದಸ್ಯರುಗಳು ತಮ್ಮ ವಾರ್ಡ್‌ನ ತೋಟಗಳಲ್ಲಿ ಇರುವ ವಲಸೆ ಕಾರ್ಮಿಕರ ಕುಟುಂಬಗಳ, ಮಕ್ಕಳ ಪಟ್ಟಿ ತಯಾರಿಸಿ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗೆ ಮಾಹಿತಿ ಒದಗಿಸುವ ಮೂಲಕ ಮುಗ್ದ ಮಕ್ಕಳಿಗೆ ಶಿಕ್ಷಣ ಕೊಡಿಸುವಂತಹ ಕೆಲಸಕ್ಕೆ ಸಹಕರಿಸಬೇಕು.
ವಲಸೆ ಕಾರ್ಮಿಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವುದು ಕೂಡ ಸರ್ಕಾರದ ಜವಬ್ದಾರಿಯಾಗಿದೆ. ಇಂತಹ ಕಾರ್ಮಿಕರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಪ್ರಯತ್ನದ ಮೂಲಕ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸುವಂತಾಗಬೇಕು. ಶತ ಶತಮಾನದ ಭವ್ಯ ಪರಂಪರೆಯ ಕನ್ನಡ ಭಾಷೆಯ ಕಂಪು ಹೊರ ರಾಜ್ಯಗಳಲ್ಲಿ ಪಸರಿಸಲು ಇದರಿಂದ ಸಹಕಾರಿಯಾಗಿದೆ.
ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ಸರ್ವೆ ನಡೆಸಿ ಮಕ್ಕಳ ಮಾಹಿತಿ ಪಡೆದು ಶಿಕ್ಷಣ ಒದಗಿಸಲು ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗಳು ಪ್ರಯತ್ನಿಸಬೇಕಿದೆ. ಆ ಮೂಲಕ ಮುಗ್ದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಕಾರ್ಯ ತ್ವರಿತವಾಗಿ ಆಗಬೇಕಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ