ಮೈಸೂರಿನ ಮುಖ್ಯ ಆಡಳಿತ ಕಚೇರಿಗಳಲ್ಲಿ ಒಂದಾದ ಮಿನಿ ವಿಧಾನಸೌಧದ ಬಳಿ ವಿದ್ಯುತ್ ದೀಪಗಳಿಲ್ಲದ ಕಾರಣ ಕತ್ತಲಾಗುತ್ತಿದ್ದಂತೆ ಕಗ್ಗತ್ತಲು ಆವರಿಸುತ್ತಿದೆ.
ಮಿನಿ ವಿಧಾನಸೌಧದ ಬಳಿಯೇ ಕೃಷಿ ಇಲಾಖೆಯ ಕಚೇರಿ, ನಗರ ಭೂಮಾಪನ ಕಚೇರಿ, ಅಬಕಾರಿ ಇಲಾಖೆಯ ಕಚೇರಿಗಳಿದ್ದು, ಅನೇಕ ಕೆಲಸಗಳ ನಿಮಿತ್ತ ನಗರ ಮತ್ತು ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಇಲ್ಲಿಗೆ ಬಂದು ಹೋಗುತ್ತಾರೆ. ಅಲ್ಲದೆ ಈ ರಸ್ತೆಯ ಮೂಲಕವೇ ಅಕ್ಕಪಕ್ಕದ ಬಡಾವಣೆಗಳ ಜನರೂ ಓಡಾಡುತ್ತಿದ್ದು, ಇಂತಹ ಜನನಿಬಿಡ ಪ್ರದೇಶದಲ್ಲಿ ಬೀದಿ ದೀಪಗಳಿಲ್ಲದಿರುವುದರಿಂದ ಕತ್ತಲಾದ ಮೇಲೆ ಜನರು ಓಡಾಡಲು ತೊಂದರೆಯಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬೇಗ ಕತ್ತಲಾಗುತ್ತಿದ್ದು, ಜನರು ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಕತ್ತಲಿನಲ್ಲಿಯೇ ಹೋಗಬೇಕಾಗಿದೆ. ಸರ್ಕಾರಿ ಕಚೇರಿಗಳ ಪರಿಸ್ಥಿತಿಯೇ ಹೀಗಾದರೆ ಉಳಿದ ಭಾಗಗಳ ಅಭಿವೃದ್ಧಿ ಹೇಗೆ? ಎಂಬ ಪ್ರಶ್ನೆ ಮೂಡಿದೆ.
ಇನ್ನು ಮಿನಿ ವಿಧಾನಸೌಧದ ಹಿಂಭಾಗದ ಸರ್ಕಾರಿ ಅತಿಥಿ ಗೃಹ ಮತ್ತು ನಾಗಮ್ಮ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು, ರಸ್ತೆಗೆ ಡಾಂಬರ್ ಹಾಕದ ಪರಿಣಾಮ ಮಣ್ಣಿನ ರಸ್ತೆಯಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಕುರಿತು ಕ್ರಮವಹಿಸಬೇಕು.
-ಎಂ.ಕೆ.ಕಿರಣ್, ಟೆಲಿಕಾಂ ಕಾಲೋನಿ, ಉದಯಗಿರಿ, ಮೈಸೂರು.





