ಮೈಸೂರಿನ ಹೆಬ್ಬಾಳ ಮೊದಲನೇ ಹಂತದ ಸುಬ್ರಮಣ್ಯ ನಗರದ ಅಡ್ಡ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ಕಸದ ರಾಶಿಯೇ ಸಂಗ್ರಹವಾಗಿದ್ದು, ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ.
ಮಹಾನಗರ ಪಾಲಿಕೆಯವರು ಸರಿಯಾಗಿ ಕಸ ವಿಲೇವಾರಿ ಮಾಡದ ಕಾರಣ ಹಲವು ದಿನಗಳಿಂದ ಕಸ ರಸ್ತೆ ಬದಿಯಲ್ಲಿ ಸಂಗ್ರಹಗೊಂಡಿದೆ. ಸಾರ್ವಜನಿಕರು ಕಸ ಹಾಕಲು ಇಲ್ಲಿ ಕಸದ ಡಬ್ಬ ಇಲ್ಲ. ಜನರು ರಸ್ತೆ ಬದಿಯಲ್ಲೆ ಕಸ ಸುರಿದು ಹೋಗುತ್ತಿದ್ದು, ಗಾಳಿ ಬೀಸಿದಂತೆಲ್ಲ ಆ ಕಸ ರಸ್ತೆಗೆ ಹರಡುತ್ತಿದೆ.
ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೂ ಸ್ಥಾನವಿದೆ. ಹೀಗಿರುವಾಗ ನಗರದಲ್ಲಿ ಸ್ವಚ್ಛತೆ ಕಾಪಾಡಬೇಕಾದದ್ದು, ಮಹಾನಗರ ಪಾಲಿಕೆ ಸಿಬ್ಬಂದಿಯ ಜತೆಗೆ ಸಾರ್ವಜನಿಕರ ಕರ್ತವ್ಯವೂ ಆಗಿದೆ.
ಇಲ್ಲಿ ಕಸದ ರಾಶಿಯೇ ಸಂಗ್ರಹವಾಗುತ್ತಿರುವುದರಿಂದ ದನ- ಕರುಗಳು, ಬೀದಿ ನಾಯಿಗಳು ಹಾಗೂ ಹಂದಿಗಳು ಆಹಾರಕ್ಕಾಗಿ ಇಲ್ಲಿಯೇ ಬೀಡುಬಿಟ್ಟಿವೆ. ಕೆಲವು ಸಲ ಅವು ಏಕಾಏಕಿ ರಸ್ತೆಗೆ ಬರುತ್ತಿದ್ದು, ಅಪಘಾತಗಳಾಗುವ ಅಪಾಯವಿದೆ. ಅಲ್ಲದೆ ಇಲ್ಲಿನ ಅಶುಚಿತ್ವದಿಂದಾಗಿ ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಆದ್ದರಿಂದ ಪಾಲಿಕೆಯವರು ಇತ್ತ ಗಮನಹರಿಸಿ ಕಸದ ರಾಶಿಯನ್ನು ತೆರವುಗೊಳಿಸಬೇಕಿದೆ.
-ಅರುಣ್ ಕುಮಾರ್, ಹೆಬ್ಬಾಳ, ಮೈಸೂರು