ವಿಧಾನಸಭಾ ಕಲಾಪದ ವೇಳೆ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆಯಾಗದೆ, ಹನಿಟ್ರ್ಯಾಪ್ ಪ್ರಕರಣದ ಬಗ್ಗೆಯೇ ಚರ್ಚೆಯಾಗಿದೆ.
ರಾಜ್ಯದಲ್ಲಿ ಸಾಕಷ್ಟು ಜಲ್ವಂತ ಸಮಸ್ಯೆಗಳಿವೆ. ನಮ್ಮನ್ನು ಆಳುವ ಜನಪ್ರತಿನಿಧಿಗಳು ಆ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ವಿಶ್ವಾಸದಿಂದ ಜನರು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಮೂಲಸೌಕರ್ಯಗಳ ಕೊರತೆ, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳ ಕೊರತೆ ಹೀಗೆ ಅನೇಕ ಸಮಸ್ಯೆಗಳ ಕುರಿತು ಅವರು ಸದನದಲ್ಲಿ ಚರ್ಚಿಸಿ ಪರಿಹಾರಗಳನ್ನು
ಹುಡುಕಬೇಕಿತ್ತು.
ಆದರೆ, ಶಾಸಕರು ತಮ್ಮ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಪ್ರಕರಣ, ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡುವ ವಿಚಾರಗಳನ್ನೇ ಚರ್ಚಿಸುತ್ತಾ ಸದನದ ಸಮಯವನ್ನು ಹಾಳು ಮಾಡುವ ಜತೆಗೆ ಕಲಾಪದ ವೇಳೆ ಗದ್ದಲ ಸೃಷ್ಟಿಸುವುದು ಮಾಮೂಲಿಯಾಗಿದೆ.
ಇಂದಿಗೂ ಅನೇಕ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ. ಕೆಲ ಗ್ರಾಮಗಳಿಗಂತೂ
ಸರಿಯಾದ ರಸ್ತೆಗಳೇ ಇಲ್ಲದೆ ಸಾರಿಗೆ ವ್ಯವಸ್ಥೆಯೂ ಇಲ್ಲದಂತಾಗಿದೆ. ಇನ್ನು ಮೂಲಭೂತ ಸಮಸ್ಯೆಗಳು ಬಹುತೇಕ ಗ್ರಾಮಗಳ ಜನರನ್ನು ಕಾಡುತ್ತಿವೆ.
ಇಂತಹ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳಾದವರು ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು, ಹನಿಟ್ರ್ಯಾಪ್ ಪ್ರಕರಣವನ್ನೇ ಚರ್ಚಿಸುತ್ತಾ ಕಾಲಹರಣ ಮಾಡಿದ್ದು ವಿಪರ್ಯಾಸ. ಮುಂದಾದರೂ ಶಾಸಕರು ತಮ್ಮ ಜವಾಬ್ದಾರಿಗಳನ್ನು ಅರಿತು, ಯಾವುದರ ಬಗ್ಗೆ ಚರ್ಚಿಸಬೇಕು ಎಂಬುದನ್ನು ತಿಳಿದುಕೊಳ್ಳಲಿ.
-ಮಹೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.





