Mysore
20
clear sky

Social Media

ಶುಕ್ರವಾರ, 02 ಜನವರಿ 2026
Light
Dark

ನಾನು ಸಶಕ್ತನಾಗಬೇಕು, ಬಲಾಢ್ಯನಾಗಬೇಕು ಎಂದು ಸಂಕಲ್ಪ ಮಾಡಬೇಕು

ಸಿದ್ದೇಶ್ವರ ಸ್ವಾಮೀಜಿ

ಮನುಷ್ಯ ಮಲಗಿ ಎದ್ದು ಕೂಡಲೆ, ಒಂದಿಷ್ಟು ಸಂಕಲ್ಪದ ಪಾರ್ಥನೆ ಮಾಡಬೇಕು. ಸುಂದರ ಸಂಕಲ್ಪಗಳನ್ನು ಮಾಡ್ಬೇಕು, ನಾವು ಏನು ಆಗಬೇಕಂತೀವಿ, ಜಗತ್ತು ಏನು ಆಗಬೇಕು ಅಂತ ನಾವು ಬಯಿಸ್ತೀವಿ, ಅಂತಹ ಸಂಕಲ್ಪವನ್ನು ಮಾಡಬೇಕು. ಎದ್ದ ಕ್ಷಣವೇ ಅದನ್ನು ಭಾವಿಸಬೇಕು. ನನ್ನ ಮೈಯಲ್ಲಿ ಶಕ್ತಿ ಇಲ್ಲ ನಾನು ಸಶಕ್ತನಾಗಬೇಕು. ನಾನು ಬಲಾಢ್ಯನಾಗಬೇಕು, ಅಂತ ಭಾವಿಸಿಕೊಳ್ಳುವುದಕ್ಕ ಪ್ರಾರ್ಥನಾ…,’

ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ

ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ಣ

ಸ್ಥಿರೈರಂಗೈಸ್ತುಷ್ಟುವಾಂಸಸ್ತನೋಭಿರ್ವ್ಯಶೇಮ

ದೇವಹಿತಂಯದಾಯುಃ ಣಣ

ಸಾವಿರಾರು ವರ್ಷಗಳ ಹಿಂದೆ ಭಾರತದ ದೇಶದೊಳಗ ಜನ ಎದ್ದ ಕೂಡಲೇ ಇದನ್ನ ಪ್ರಾರ್ಥನೆ ಮಾಡ್ತಾ ಇದ್ರು. ಎಂಥ ಸುಂದರ ಪಾರ್ಥನೆ ಮಾಡ್ತಾ ಇದ್ರು. ಆದ್ರ ನಮ್ಮ ಪ್ರಾರ್ಥನೆಗಳು ಎದ್ದ ಬಳಿಕ ಏನದವಾ, ಕಾಫಿ, ಚಹಾ, ಇಲ್ಲಿ ಒಂದು ಬೀಡಿ, ಒಂದು ಸಿಗರೇಟ್, ಒಂದು ಚೀಟಿ ಇವು ನಮ್ಮ ಪ್ರಾರ್ಥನೆ.., ಎದ್ದ ಕೂಡಲೇ ಹುಡುಕಾಡುತೀವಲ್ಲ ಅದೇ ನಮ್ಮ ಪ್ರಾರ್ಥನೆ. ಆದರೆ, ಆಗ ಎಂತಹ ಅದ್ಭುತ ಪ್ರಾರ್ಥನೆ ಮಾಡಿದ್ರು. ಇಡೀ ಭಾರತ ದೇಶದ ಎಲ್ಲಾ ನದಿ ದಂಡೆಯೊಳಗ ಆಶ್ರಮಗಳು, ಇಲ್ಲಿ ರಾಮೇಶ್ವರದಿಂದ ಹಿಮದ ಬೆಟ್ಟಗಳವರೆಗೆ, ಕಾಶ್ಮೀರದವರೆಗಿರುವಂತಹ ಎಲ್ಲ ನದಿಗಳ ದಡದಲ್ಲಿ ಆಶ್ರಮಗಳು, ಸಣ್ಣ ಪುಟ್ಟ ನಗರಗಳು, ಅಲ್ಲಿ ಜನ ಎದ್ದ ಕ್ಷಣವೇ ಎರಡು ಕೆಲಸ ಮಾಡ್ತಿದ್ರು, ಒಂದು ಸೂರ್ಯ ದರ್ಶನ, ಯಾಕೆ? ‘ಬೆಳಕು, ಪ್ರಕಾಶ, ಉಷ್ಣತೆ, ಶಕ್ತಿಯ ಪುಂಜ ಸೂರ್ಯ, ಇಂತಹ ಸೂರ್ಯನ ಶಕ್ತಿ ನಮ್ಮ ಕಣ್ಣನ್ನು ಪ್ರವೇಶಿಸಬೇಕು, ನಮ್ಮ ಮನಸ್ಸನ್ನ ಪ್ರವೇಶಿಸಬೇಕು, ನಮ್ ಮೈಯ್ಯನ್ನು ಪ್ರವೇಶ ಮಾಡಬೇಕು, ನಮ್ಮಲ್ಲಿ ಉತ್ಸಾಹ ತುಂಬಬೇಕು, ಸೂರ್ಯ ಹೆಂಗ ಪ್ರಕಾಶಮಾನ ಹಾಂಗ ನಾವು ಉತ್ಸಾಹಯುಕ್ತ ಆಗಬೇಕು. ಅದಕ್ಕಾಗಿ ಮೊದಲನೆಯ ಕೆಲಸ ಸೂರ್ಯನ ನೋಡೋದು. ಆ ಬಳಿಕ ಸಂಕಲ್ಪ ‘ಭಗವಂತನೇ, ಸೂರ್ಯನೇ ನೀನೇ ದೇವರು, ಭೂಮಿಯೇ ನೀನೇ ದೇವರು, ಆಕಾಶವೇ ನೀನೇ ದೇವರು, ಗಾಳಿಯೇ ನೀ ದೇವರು, ಎಲ್ಲ ದೇವರು. ಭಗವಂತನೇ ನನ್ನ ಪ್ರಾರ್ಥನೆ, ನನ್ನ ಬಯಕೆ ಅದನ್ನ ನಾನು ವ್ಯಕ್ತ ಮಾಡ್ತೇನೆ. ಏನು ಅಂದರ. ‘ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ’ ನಾನು ದಿನದ ತುಂಬು ನಸುಕಿನಲ್ಲಿ ಎದ್ದು ಸಂಕಲ್ಪ ಮಾಡ್ತಿನಿ, ಏನು ಮಾಡಬೇಕು? ‘ನಾವೆಲ್ಲ ಒಳ್ಳೆಯದನ್ನು ಕೇಳಬೇಕು, ಈ ದಿನ ಮಲಗೋವರೆಗೆ ಒಳ್ಳೆಯ ಶಬ್ದಗಳನ್ನು ಕೇಳಬೇಕು ನನ್ನ ಕಿವಿಗಳು’. ‘ಭಾವನೆಯಲ್ಲಿ ಸಾಮರ್ಥ್ಯ ಅದ, ಅದೇ ಪ್ರಾರ್ಥನಾ ಸಾಮಾರ್ಥ್ಯ.’ ಭಾವಿಸಬೇಕು ಮನುಷ್ಯ, ‘ನಾನಿಂದ ಒಳ್ಳೆದನ್ನ ಕೇಳ್ತೀನಿ, ಮಂಗಳವಾದದನ್ನ ಕೇಳುತ್ತೇನೆ, ಕೆಟ್ಟದ್ದನ್ನು ಕೇಳೋದಿಲ್ಲ. ಹಾಂಗ ನಾನು ಭಾವಿಸಿಕೊಳ್ಳೋದು. ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ. ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ- ಕಣ್ಣಗಳಾದಾವ, ‘ಈ ಕಣ್ಣುಗಳಿಂದ ದಿನದ ತುಂಬ ನಾನು ಒಳ್ಳೆಯದನ್ನ ನೋಡಬೇಕು. ನನ್ನ ಕಣ್ಣುಗಳು ಒಳ್ಳೆಯದನ್ನೇ ಕಾಣಬೇಕು. ಹಾಂಗ ನಾನು ಬಯಸ್ಸುತ್ತೇನೆ’. ಎಂಥ ಬಯಕೆ ನೋಡು. ಬಯಕೆಯ ಸಾಮರ್ಥ್ಯ ಎಂಥ ಅಗಾಧವಾದದ್ದು. ‘ನಾವು ಏನು ಬಯಸ್ತೀವಿ ಅದು ನಮ್ಮ ಶರೀರದಾಗ ರೂಪಗೊಳ್ಳುತಾ ಹೋಗ್ತದ. ನಮ್ಮ ಮನಸ್ಸು ರೂಪಗೊಳ್ಳುತ್ತದೆ. ನಮ್ಮ ಬುದ್ಧಿಗೆ ಸಾಮರ್ಥ್ಯ ಬರ್ತದ, ಆ ಬಳಿಕ ಜಗತ್ತು ನಮಗೆ ಸವಿಯಾಗ್ತದ, ಸುಂದರವಾಗ್ತದ’. ನನ್ನ ಕಣ್ಣು ಒಳ್ಳೆದನ್ನ ನೋಡ್ಲಿ, ನನ್ನ ಕಿವಿಗಳು ಒಳ್ಳೆದನ್ನ ಕೇಳ್ಲಿ, ಹಿಂಗ ಎದ್ದ ಕ್ಷಣವೇ ಭಾವಿಸೋದು. ನಾವು ಯಾವಾಗ ಹೇಳುತ್ತೀವಿ ಎಂತಹ ಪವಿತ್ರ, ಸುಂದರ ಕ್ಷಣ ಅದು ನಸುಕಿನ ಕ್ಷಣ. ಕಣ್ಣು ಬಿಟ್ಟಾಗ, ನಿದ್ರೆ ಮುಗಿದಿರುತ್ತದ, ಮೈಯಿ ಉತ್ಸಾಹವನ್ನು ತುಂಬಿಕೊಂಡಿರುತ್ತದ, ಶಕ್ತಿ ಹೊರಗ ಹೊಮ್ಮುತಾ ಇರ್ತದಾ. ಅಂತಹ ಕ್ಷಣದಲ್ಲಿ ನನ್ನ ಮನಸ್ಸನ್ನು ನಾನು ರೂಪಿಸುವುದು, ನಾನು ಭಾವಿಸೋದು, ನನ್ನಲ್ಲಿ ಶಕ್ತಿ ಅದ, ನಾನು ಈ ದಿನ ಒಳ್ಳೆದನ್ನ ಕೇಳಬೇಕು, ಒಳ್ಳೆದನ್ನ ನೋಡಬೇಕು.

ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ಸ್ಥಿರೈರಂಗೈಸ್ತುಷ್ಟುವಾಂಸಸ್ತನೋಭಿರ್ವ್ಯಶೇಮ ದೇವಹಿತಂಯದಾಯುಃ ಯಾದಾಯುಹು- ಏನ್ ಚಂದ ಹೇಳ್ತಾನ, ‘ಭಗವಂತನೇ ನನ್ನ ಇಂದ್ರಿಯಗಳು ಬಲಾಢ್ಯವಾಗಿರಬೇಕು. ಕೈಯ್ಯ, ಕಾಲಾ, ಮೈಯ್ಯಾ ಹೆಂಗೀರಬೇಕು ಅಂದರ ನಾನು ನಡೀಬಲ್ಲೇ ಸಾವಿರ ಕಿಮೀ, ನಾನು ಎತ್ತಬಲ್ಲೆ, ದಿನದ ತುಂಬ ಕೆಲಸ ಮಾಡಬಲ್ಲೆ, ಅನ್ನುವ ಶಕ್ತಿ ಸಂಕಲ್ಪ ಭುಜಗಳ ಬಗ್ಗೆ ನನ್ನಲ್ಲಿರಬೇಕು’ ಆಗ ಭಾವಿಸೋದು.

‘ಭಗವಂತನೇ ನನಗಿನ್ನು ತುಂಬ ಕೆಲಸಕೊಡು ಮಾಡಬಲ್ಲೇ, ನನ್ನ ಕಾಲುಗಳಲ್ಲಿ ಶಕ್ತಿ ಅದಾ ಏರಬಲ್ಲೇ, ನಡಿಯಬಲ್ಲೇ ನಾನು ಅಶಕ್ತನಲ್ಲ, ಸಶಕ್ತ. ಹೀಗೆ ಭಾವಿಸೋದು.

ಮೂರನೆಯದು ಸ್ಥಿರೈರಂಗೈಸ್ತುಷ್ಟುವಾಂಸಸ್ತನೋಭಿರ್ವ್ಯಶೇಮ- ಏನ್ ಚಂದ ಅದ. ‘ನನ್ನ ದೇಹ ಚೆನ್ನಾಗಿರಬೇಕು, ಸಬಲವಾಗಿರಬೇಕು, ನಾನು ಏನು ಉಣ್ತೀನಿ ಅದು ಶಕ್ತಿಯಾಗಿ ಮಾರ್ಪಡಬೇಕು. ನಾನು ಏನು ಕುಡೀತಿನಿ ಅದು ಶಕ್ತಿಯಾಗಿ ಮಾರ್ಪಾಡಾಗಬೇಕು ಹಾಗೆ ನನ್ನ ಮಾತುಗಳಲ್ಲಿ ಶಕ್ತಿ, ನನ್ನ ನೋಟದಲ್ಲಿ ಶಕ್ತಿ, ನನ್ನ ಕಿವಿಗಳಲ್ಲಿ ಶಕ್ತಿ, ನನ್ನ ಪ್ರತಿ ಇಂದ್ರಿಯದಲ್ಲಿ ಶಕ್ತಿ ತುಂಬಿ ತುಂಬಿ ನಿಲ್ಲಬೇಕು, ಹರೀತಾನೇ ಇರಬೇಕು. ಅಷ್ಟದ್ಭುತ ವ್ಯಕ್ತಿ ನಾನಾಗಬೇಕು ಅಂತ ಪ್ರಾರ್ಥನೆ ಮಾಡಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!