Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಭಾರತ್ ಜೋಡೊ ಹೃದಯ ಬೆಸೆಯುವ ಯಾತ್ರೆ

ರಾಹುಲ್ ಅವರ ಯಾತ್ರೆ ಒಂದರ್ಥದಲ್ಲಿ ಅಡ್ವಾಣಿ ಯಾತ್ರೆಗೆ ಮುಖಾಮುಖಿಯಾಗಿ ನಿಂತಿರುವ ಯಾತ್ರೆಯಂತೆಯೂ ಕಾಣಿಸುತ್ತಿದೆ!

ಜಿ.ಪಿ.ಬಸವರಾಜು, ಹಿರಿಯ ಪತ್ರಕರ್ತರು
ರಾಹುಲ್ ಗಾಂಧಿ ಅವರು ಆರಂಭಿಸಿರುವ ಕಾಂಗ್ರೆಸ್ಸಿನ ಭಾರತ್ ಜೋಡೊ ಯಾತ್ರೆ ಮೂರು ವಾರಗಳನ್ನು ಪೂರೈಸಿದೆ. ಎರಡು ರಾಜ್ಯಗಳನ್ನುಸುತ್ತಿದೆ. ಇದೀಗ ಕರ್ನಾಟಕವನ್ನು ಪ್ರವೇಶಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಹೊಸ ಉಮೇದು, ಬಲಗಳನ್ನು ತುಂಬುವ ನೇರ ಉದ್ದೇಶದಿಂದ ಈ ಯಾತ್ರೆ ಸೆಪ್ಟೆಂಬರ್ ೭ ರಂದು ಆರಂಭವಾದರೂ, ಅದು ಹೊಸರೂಪಗಳನ್ನು, ಹೊಸಅರ್ಥ, ಆಯಾಮಗಳನ್ನು ಪಡೆದುಕೊಂಡಿತು. ಸಾವಿರಾರು, ಲಕ್ಷಾಂತರ ಜನ ಈ ಯಾತ್ರೆಗೆ ಕೈಜೋಡಿಸುತ್ತ ಅದರ ಅರ್ಥವಿಸ್ತಾರಕ್ಕೆ ಕಾರಣವಾಗಿದ್ದಾರೆ.
೧೨ ರಾಜ್ಯಗಳು ಮತ್ತು ೨ ಕೇಂದ್ರಾಡಳಿತ ಪ್ರದೇಶಗಳಲ್ಲಿ ೩೫೦೦ ಕಿ.ಮೀ.ನಷ್ಟು ದೂರವನ್ನು ಕಾಲುನಡಿಗೆಯಲ್ಲಿ ಸುತ್ತುವುದರ ಮೂಲಕ ‘ಒಡೆದ ಭಾರತವನ್ನು’ ಜೋಡಿಸುವುದು ಈ ಯಾತ್ರೆಯ ಗುರಿಯಾಗಿದೆ.
ಇಂಥ ಯಾತ್ರೆಗಳು ಭಾರತಕ್ಕೆ ಹೊಸವಲ್ಲ. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ನೇರವಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಲಿಲ್ಲ. ಅವರು ಮೊದಲು ಭಾರತವನ್ನು ಸುತ್ತಿದರು. ಆ ಹೊತ್ತಿನ ಜನತೆಯ ಸ್ಥಿತಿಗತಿಯನ್ನು ತಿಳಿಯಲು ಹವಣಿಸಿದರು. ಆ ಯಾತ್ರೆ ಅವರ ಒಳ-ಹೊರಗುಗಳನ್ನು ಸಂಪೂರ್ಣವಾಗಿ ಬದಲಿಸಿತು.
ನಂತರದ ಯಾತ್ರೆಗಳು ಭಾರತೀಯರ ನೆನಪಿನಲ್ಲಿ ಉಳಿದಿವೆ. ಅಡ್ವಾಣಿ ನಡೆಸಿದ ರಥಯಾತ್ರೆ ಮತ್ತು ಅದು ತಂದುಕೊಟ್ಟ ಪರಿಣಾಮಗಳನ್ನು ಈಗಲೂ ನಾವೆಲ್ಲ ಅನುಭವಿಸುತ್ತಲೇ ಇದ್ದೇವೆ.
ರಾಹುಲ್ ಅವರ ಯಾತ್ರೆ ಒಂದರ್ಥದಲ್ಲಿ ಅಡ್ವಾಣಿ ಯಾತ್ರೆಗೆ ಮುಖಾಮುಖಿಯಾಗಿ ನಿಂತಿರುವ ಯಾತ್ರೆಯಂತೆಯೂ ಕಾಣಿಸುತ್ತಿದೆ. ಈ ಯಾತ್ರೆಯ ನಂತರ ಕಾಂಗ್ರೆಸ್ ಮಾತ್ರವಲ್ಲ, ಸ್ವತಃ ರಾಹುಲ್ ಗಾಂಧಿಯವರೇ ಬೇರೆಯ ರೂಪವನ್ನು, ವ್ಯಕ್ತಿತ್ವವನ್ನು ಪಡೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
೨೦೧೪ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಭಾರತೀಯ ಜನತಾಪಕ್ಷ ಅಧಿಕಾರವನ್ನು ಭರ್ಜರಿ ಬಹುಮತದಿಂದ ಹಿಡಿಯಿತು. ಮೋದಿ ಪ್ರಧಾನಿಯಾದರು. ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನದಲ್ಲಿ ಇಂಥ ಅವಕಾಶಗಳು ಇವೆ. ಯಾವ ಪಕ್ಷವೂ ಅಧಿಕಾರಕ್ಕೆ ಬರುವ, ಯಾರೂ ಪ್ರಧಾನಿಯಾಗುವ ಸಮಾನ ಅವಕಾಶಗಳನ್ನು ನಾವು ಒಪ್ಪಿಕೊಂಡಿರುವ, ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನಕಲ್ಪಿಸಿಕೊಟ್ಟಿದೆ. ಕೆಲವು ರಾಜ್ಯಗಳಲ್ಲೂ ಬಿಜೆಪಿ ಅಧಿಕಾರವನ್ನು ಹಿಡಿದು, ‘ಡಬಲ್ ಎಂಜಿನ್’ ಸರ್ಕಾರಗಳ ಹುಟ್ಟಿಗೆ ಕಾರಣವಾಗಿದೆ.
ಈ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಭಾರತ ಪಡೆದುಕೊಂಡ ರೂಪಾಂತರಗಳನ್ನು ನಾವೆಲ್ಲ ನೋಡಿದ್ದೇವೆ; ಅದರ ಕರಾಳ ನರ್ತನವನ್ನೂ ಕಂಡಿದ್ದೇವೆ. ಅಧಿಕಾರ ವಿಕೇಂದ್ರೀಕರಣದ ಬದಲು ಮೂರ್ನಾಲ್ಕು ವ್ಯಕ್ತಿಗಳಲ್ಲೇ ಅಧಿಕಾರದ ಜುಟ್ಟು ಇರುವುದನ್ನೂ ಗಮನಿಸಿದ್ದೇವೆ. ಅದೇ ರೀತಿ ಈ ದೇಶದ ಸಾಮಾನ್ಯ ಜನರನ್ನು ಹಿಂಡುವ, ಬೆರಳೆಣಿಕೆಯ ಬಂಡವಾಳಗಾರರನ್ನು ಜಗತ್ತಿನ ಅತಿ ಶ್ರೀಮಂತರ ಪಟ್ಟಿಗೆ ಸೇರಿಸಿದ ಅಂದರ್‌ಬಾಹರ್ ಆಟವನ್ನು ಭಾರತೀಯರು ಕಾಣಬೇಕಾಯಿತು.
ಇದು ಕೇವಲ ಆಟವಲ್ಲ; ಜನರ ಬದುಕನ್ನು ನುಂಗುವ ಅಟ್ಟಹಾಸದ ರಾಕ್ಷಸೀಕೃತ್ಯ ಎಂಬುದನ್ನೂ ನಾವೆಲ್ಲ ಅನುಭವಿಸಬೇಕಾಯಿತು. ಬೆಲೆಗಳ ಏರಿಕೆಯ ಬಿಸಿ, ನಿರುದ್ಯೋಗದ ಬಿಸಿ, ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿಯನ್ನು ಗಾಳಿಗೆತೂರಿದ ಬಿಸಿ, ಸಮುದಾಯಗಳನ್ನು ಒಡೆದು ದ್ವೇಷವನ್ನು ಬಿತ್ತಿದ ಬಿಸಿ, ಸ್ವಾತಂತ್ರ್ಯವೆಂಬುದು ಕೆಲವರ ಸ್ವೇಚ್ಛಾಚಾರವಾದ ಬಿಸಿ, ಸರ್ಕಾರದ ಆಡಳಿತಯಂತ್ರವನ್ನು ವಿರೋಧಪಕ್ಷಗಳನ್ನು ಹತ್ತಿಕ್ಕಲು ಬಳಸಿಕೊಂಡ ಬಿಸಿ- ಹೀಗೆ ಬಗೆಬಗೆಯ ಬಿಸಿಗಳಿಗೆ ಮೈಕೊಟ್ಟಿದ್ದೇವೆ. ಇದು ಕೇವಲ ಬಿಸಿಯಲ್ಲ; ಇಡೀ ಭಾರತವೇ ಕುದಿವ ಕಡಾಯಿಯಲ್ಲಿ ಬೇಯುವ ಸಹಿಸಲಸಾಧ್ಯವಾದ ನೋವಿನ ಅನುಭವ.
ಇದರ ಮುಖಗಳು ಇನ್ನು ಅಸಂಖ್ಯ. ಇ.ಡಿ., ಸಿಬಿಐ, ಎನ್‌ಐಎ, ಇತ್ಯಾದಿ ಎಲ್ಲ ತನಿಖಾ ಸಂಸ್ಥೆಗಳ ಸ್ವತಂತ್ರ ಅಸ್ತಿತ್ವವನ್ನೇ ನಾಶಮಾಡಲಾಯಿತು. ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆ, ಅಕ್ರಮ ಸಂಪತ್ತಿನ ವಿರುದ್ಧದ ತನಿಖೆ ಇತ್ಯಾದಿ ನೆಪಗಳನ್ನು ಹೇಳಿ ತನಗಾಗದವರನ್ನು ಹಿಂಸಿಸಲು, ಟೀಕಾಕಾರರನ್ನು ಬಗ್ಗು ಬಡಿಯಲು ನೋಡಲಾಯಿತು. ಇಂಥ ತನಿಖೆಗಳಿಗೆ ಒಳಗಾಗಿ ಹಿಂಸೆ ಅನುಭವಿಸಿದವರು ಯಾರು ಎಂಬುದನ್ನು ಗಮನಿಸಿದರೆ ತನಿಖೆಗಳ ಹಿಂದಿನ ಗುಟ್ಟು ಮತ್ತು ಉದ್ದೇಶ ಸುಲಭವಾಗಿ ತಿಳಿಯುತ್ತದೆ. ಜನಪ್ರತಿನಿಧಿಗಳನ್ನು ಗುಪ್ತವಾಗಿ ಕೊಳ್ಳುವ, ಅವರನ್ನು ಮಾರಾಟದ ಸರಕಿನಂತೆ ಬಳಸುವ, ಆ ಮೂಲಕ ಸರ್ಕಾರಗಳನ್ನು ಬೀಳಿಸು ಮತ್ತು ಏಳಿಸುವ ಆಟಗಳೂ ಹೆಚ್ಚಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿ ಮಾಡುವ ಇಂಥ ಆಟಗಳು ಯಾವಾಗಿನಿಂದ ಹೆಚ್ಚಾದವು ಮತ್ತು ಇದರ ಹಿಂದಿರುವ ಹಣದ ಮೊತ್ತ, ಸಂಪತ್ತಿನ ಅಗಾಧ ಪ್ರಮಾಣ ಎಂಥದು, ಯಾರ ಕೈವಾಡ ಇದೆಲ್ಲದರಹಿಂದಿದೆ, ಸಾಮಾನ್ಯ ಜನತೆಯ ಬದುಕು ಯಾಕೆ ದುರ್ಭರವಾಗುತ್ತಿದೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಂಡರೆ ಸತ್ಯದ ಅನೇಕ ಮುಖಗಳು ಕಾಣಿಸುತ್ತವೆ.
ಒಂದೆಡೆ ಪ್ರಜಾತಂತ್ರ ವ್ಯವಸ್ಥೆಯೇ ಬುಡಮೇಲಾಗುತ್ತಿದ್ದರೆ, ಮತ್ತೊಂದು ಕಡೆ ವ್ಯಕ್ತಿಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಪ್ರಜಾತಂತ್ರ ವ್ಯವಸ್ಥೆಯ ಮೂಲಭೂತ ಕಾಳಜಿಗಳೇ ಮಾಯವಾಗುತ್ತಿವೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿದ, ಟೀಕೆ ಮಾಡಿದ ಬುದ್ಧಿಜೀವಿಗಳು, ಕಲಾವಿದರು, ಬರಹಗಾರರು, ವಕೀಲರು, ಸಾಮಾಜಿಕ ಕಾರ್ಯಕರ್ತರು ವಿನಾಕಾರಣ ಜೈಲು ಸೇರಬೇಕಾದ ಘೋರ ಪರಿಸ್ಥಿತಿಯನ್ನು ಹುಟ್ಟುಹಾಕಲಾಗಿದೆ. ಮಾಧ್ಯಮಗಳೂ ಮುಕ್ತವಾಗಿ ಮಾತನಾಡದಂಥ, ಕಾರ್ಯ ನಡೆಸದಂಥ ಸ್ಥಿತಿಯೂ ಉಂಟಾಗಿದೆ. ತೋಳ್ಬಲ ಮತ್ತು ಅಪಾರ ಪ್ರಮಾಣದ ಹಣ ಇಂಥ ಕೃತ್ಯಗಳ ಹಿಂದಿರುವುದು ಗುಟ್ಟಿನ ಸಂಗತಿಯಲ್ಲ.
ಆಡಳಿತ ಯಂತ್ರವನ್ನು ರೂಪಾಂತರಿಸಿರುವುದು, ನ್ಯಾಯಾಂಗವನು ್ನಕೈವಶ ಮಾಡಿಕೊಳ್ಳಲು ಬಲೆ ಬೀಸುತ್ತಿರುವುದು ಇತ್ಯಾದಿ ಪ್ರಜಾತಂತ್ರ ವಿರೋಧಿ ನಡೆಗಳನ್ನೂ ಇವತ್ತೂ ನೋಡಬಹುದಾಗಿದೆ.
ಇನ್ನೂ ಘೋರ ಅಪರಾಧವೆಂದರೆ, ಜನರನ್ನು ಒಡೆಯುತ್ತಿರುವ ಪ್ರಯತ್ನ. ಭಾರತವೇ ಕೂಡಿ ಬಾಳಲು ಹೆಸರಾದದ್ದು. ಬಹು ಮುಖೀ ಸಂಸ್ಕೃತಿ ಇದರ ಜೀವಾಳ. ಭಾಷೆ, ಪ್ರದೇಶ, ಧರ್ಮ, ಸಂಸ್ಕೃತಿ ಇತ್ಯಾದಿ ಹತ್ತಾರು ಅಂಶಗಳು ಬೇರೆಬೇರೆಯಾಗಿದ್ದರೂ ನಾವೆಲ್ಲ ಭಾರತೀಯರಾಗಿ ಬಾಳುವ ಪ್ರಚಂಡಶಕ್ತಿಯೊಂದು ನಮ್ಮೊಳಗೇ ಸಾವಿರಾರು ವರ್ಷಗಳಿಂದ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಇದನ್ನೆಲ್ಲ ನಾಶ ಮಾಡಿದಂತೆ ಇವತ್ತು ದ್ವೇಷವನ್ನು ಬಿತ್ತಿ ಜನರನ್ನು ಒಡೆಯಲಾಗುತ್ತಿದೆ. ಅಹಿಂಸೆಯನ್ನು ತುಂಡರಿಸಿ ಹಿಂಸೆಗೆ ದಾರಿ ಮಾಡಿಕೊಡಲಾಗುತ್ತಿದೆ.
ಭಾಷೆ, ಧರ್ಮ, ಪ್ರದೇಶ, ಸಂಸ್ಕೃತಿ ಎಲ್ಲವೂ ಆಯುಧಗಳಾಗಿ ಬಳಕೆಯಾಗಿ ಸಹಬಾಳ್ವೆಯನ್ನು ಕಡಿದು, ಹಿಂಸೆಯೇ ತಾಂಡವವಾಡುವ ಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ.
ಇದು ದುರ್ಭರ ಭಾರತ; ವಿಷವುಂಡ ಭಾರತ; ಒಡೆದ ಭಾರತ. ಇದನ್ನು ಜೋಡಿಸುವ ಯಾತ್ರೆ ಯಾರೇ ಮಾಡಲಿ, ನಮಗೆಲ್ಲ ಕೈಜೋಡಿಸಲು ಒಂದು ಅಪರೂಪದ ಅವಕಾಶ. ಎಲ್ಲ ವಿರೋಧ ಪಕ್ಷಗಳೂ ಸೇರಿ ಈ ಜೋಡೊ ಯಾತ್ರೆಯನ್ನು ಮಾಡಿದ್ದರೆ, ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು. ಇದು ಸಾಧ್ಯವಾಗದ ಕನಸೇನಲ್ಲ. ಆದರೆ ಸದ್ಯ, ಎದುರಿಗಿರುವ ವಾಸ್ತವ ಕಾಂಗ್ರೆಸ್, ರಾಹುಲ್ ರೂಪಿಸಿರುವ ಯಾತ್ರೆ. ಈ ಯಾತ್ರೆಗೆ ಕೈಜೋಡಿಸುವುದೆಂದರೆ ನಾವು ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿದಂತಲ್ಲ; ಅದರ ಸಿದ್ಧಾಂತದ ಜೊತೆಗೆ, ಕಾರ್ಯಕ್ರಮದ ಜೊತೆ ಕೈಜೋಡಿಸಿದಂತೆಯೂ ಅಲ್ಲ. ಇದೊಂದು ಸದಾಶಯದ, ಸದ್ಭಾವನೆಯ, ಜೀವಪರ ಯಾತ್ರೆ.
ನಾಗರಿಕ ಜಗತ್ತಿನ ಅನೇಕ ಗಣ್ಯರು ಯಾತ್ರೆಯ ಜೊತೆಗೂಡಿ ಹೆಜ್ಜೆ ಹಾಕಿದ್ದಾರೆ. ಅನೇಕ ಸಂಘಸಂಸ್ಥೆಗಳು, ಮಹಿಳೆಯರು, ಯುವಕರು, ವಿಭಿನ್ನ ಧಾರ್ಮಿಕ ನಂಬಿಕೆಯವರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಸಾಥ್ ನೀಡಿ ಬೆಂಬಲ ನೀಡಿದ್ದಾರೆ. ಭಾರತವನ್ನು ಜೋಡಿಸುವ, ಜನರನ್ನು ಕೂಡಿಸುವ, ಬದುಕನ್ನು ಸಹನೀಯ ಮಾಡುವ ಕೆಲಸ ದೊಡ್ಡದು. ಅದನ್ನು ನಾವು ಬೆಂಬಲಿಸಬೇಕು. ಆ ಮೂಲಕ ದೇಶವನ್ನು ಮತ್ತು ಜನರನ್ನು ಒಡೆಯುವ ಶಕ್ತಿಗಳನ್ನು ಹತ್ತಿಕ್ಕಬೇಕು. ಅದು ನಮ್ಮೆಲ್ಲರ ಕರ್ತವ್ಯ ಕೂಡ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ