Mysore
30
scattered clouds

Social Media

ಗುರುವಾರ, 26 ಫೆಬ್ರವರಿ 2026
Light
Dark

ಆಂದೋಲನ ಓದುಗರ ಪತ್ರ : 18 ಬುಧವಾರ 2023

ಗ್ರಂಥಾಲಯದಲ್ಲಿ ಸೌಲಭ್ಯ ಕಲ್ಪಿಸಿ

ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಮಾಲಾಪುರ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಯಾಗಿ ದಶಕವೇ ಕಳೆದಿದ್ದು, ಸಮರ್ಪಕ ಸೌಲಭ್ಯಗಳಿಲ್ಲದೇ ಉಪ ಯೋಗಕ್ಕೆ ಬಾರದಂತಾಗಿದೆ. ಈ ಭಾಗದಲ್ಲಿ ಇತ್ತೀಚೆಗೆ ಓದುಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಂಥಾಲಯವು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಿತ್ತು. ಆದರೆ, ಗ್ರಂಥಾಲಯದಲ್ಲಿ ಯಾವುದೇ ರೀತಿಯ ಸೌಲಭ್ಯಗಳೂ ಓದುಗರಿಗೆ ಲಭ್ಯತೆ ಇಲ್ಲ. ಇದಲ್ಲದೆ, ಗ್ರಂಥಾಲಯದಲ್ಲಿ ಕುರ್ಚಿಗಳು ತೀರಾ ಕಡಿಮೆ ಸಂಖ್ಯೆಯಲ್ಲಿವೆ. ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವ ಆಕಾಂಕ್ಷಿಗಳಿಗೆ ಪರಮಾರ್ಶನ ಪುಸ್ತಕಗಳ ಕೊರತೆಯೂ ಹೆಚ್ಚಾಗಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಗ್ರಂಥಪಾಲಕರಿಗೆ ಮನವಿ ಮಾಡಿದ್ದರೂ ಅವರು ಅದರ ಬಗ್ಗೆ ಸೂಕ್ತ ಕ್ರಮವಹಿಸುತ್ತಿಲ್ಲ. ಇದರೊಂದಿಗೆ ಗ್ರಂಥಾಲಯ ತೆರೆದಿರುವ ಸಮಯವನ್ನೂ ಹೆಚ್ಚಿಸಬೇಕು. ಇದರ ಬಗ್ಗೆಯೂ ಗ್ರಂಥಪಾಲಕರು ಗಮನ ಹರಿಸಿ ಅನುಕೂಲ ಮಾಡಿಕೊಡಬೇಕು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಓದುಗರ ಅನುಕೂಲಕ್ಕೆ ತಕ್ಕಂತೆ ಕ್ರಮಕೈಗೊಳ್ಳಬೇಕು.

ಆರ್.ಅಜಿತ್ ಕುಮಾರ್,

ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.


ಮದ್ಯವ್ಯಸನಿಗಳ ಹಾವಳಿ ತಪ್ಪಿಸಿ

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆಗಳ ಆವರಣದಲ್ಲಿ ಮದ್ಯ ವ್ಯಸನಿಗಳ ಮದ್ಯದ ಕೂಟಗಳು ಹೆಚ್ಚಾಗತೊಡಗಿವೆ. ಪ್ರತಿನಿತ್ಯ ರಾತ್ರಿಯಾಗುತ್ತಲೇ ಅಲ್ಲಿ ಕುಡುಕರು ಗುಂಪಾಗಿ ಕುಳಿತು ಮದ್ಯ ಸೇವಿಸುವುದಲ್ಲದೇ ಬಾಟಲಿಗಳನ್ನು ಅಲ್ಲಲ್ಲೇ ಬೀಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಕಾಲೇಜು ಆವರಣದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಪ್ಯಾಕೆಟ್‌ಗಳು ಬಿದ್ದಿರುತ್ತವೆ. ಅಂತರಸಂತೆ ಕಾಲೇಜು ಆವರಣದಲ್ಲೇ ಮಹದೇಶ್ವರಸ್ವಾಮಿ ದೇವಾಲಯವೂ ಇದೆ. ಅಲ್ಲದೇ ಪ್ರೌಢಶಾಲೆಯೂ ಪಕ್ಕದಲ್ಲೇ ಇದ್ದು, ಈ ರೀತಿ ಅನೈತಿಕ ಚಟುವಟಿಕೆ ಗಳು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ನೀಡಿ ಪ್ರತಿದಿನ ರಾತ್ರಿ ಗಸ್ತು ತಿರುಗುತ್ತಿದ್ದರೂ ಅವರ ಗಮನಕ್ಕೆ ಬಾರದಂತೆ ಇಲ್ಲಿ ಮದ್ಯದ ಕೂಟಗಳು ನಡೆಯುತ್ತಿವೆ. ಇನ್ನು ದೇವಾಲಯಕ್ಕೆ ಬರುವವರು ಕೂಡ ಅಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳನ್ನು ನೋಡಿ ಮುಜುಗರ ಅನುಭವಿಸುತ್ತಿದ್ದು, ಇದು ಅಲ್ಲಿನ ವಾತಾವರಣವನ್ನು ಹಾಳು ಮಾಡಿದೆ. ಸಂಬಂಧಪಟ್ಟವರು ಕಾಲೇಜು ಆವರಣದಲ್ಲಿ ಇಂಥ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ.

ರಾಜೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!