ಹನೂರು: ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ನಗರ ಪ್ರದಕ್ಷಿಣೆ ಹಾಕಿ ಸ್ಥಳೀಯ ಸಮಸ್ಯೆಗಳನ್ನು ಅಲಿಸಿದರು.
ಡಿಸೆಂಬರ್ 12ರಂದು ಮುಖ್ಯಮಂತ್ರಿಗಳ ಹನೂರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಸ್ಥಳ ಪರಿಶೀಲನೆಗೆ ಆಗಮಿಸಿ ನಂತರ ಬಿಜೆಪಿಗೆ ಕಚೇರಿಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಇಳಿದು ಸುಮಾರು ಅರ್ಧ ಕಿ.ಮೀ ನಡೆದು ಸ್ಥಳೀಯರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮುಖ್ಯ ರಸ್ತೆ ಗುಂಡಿ ಬಿದ್ದಿದ್ದ ಹಿನ್ನೆಲೆ ಕೆ ಶಿಫ್
ವ್ಯವಸ್ಥಾಪಕ ಶಿವಕುಮಾರ್ ರವರಿಗೆ ಅಂಬೇಡ್ಕರ್ ವೃತ್ತದಿಂದ ಪೆಟ್ರೋಲ್ ಬಂಕ್ ವರೆಗಿನ ರಸ್ತೆಗೆ ತಾತ್ಕಾಲಿಕವಾಗಿ ಡಾಂಬರು ಹಾಕಿಸುವಂತೆ ಸೂಚನೆ ನೀಡಿದರು. ನಂತರ ಬಂಡಳ್ಳಿ ಗ್ರಾಮದ ಯುವಕನೋರ್ವ ಬಂಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಿಸಿ ಬಂಡಳ್ಳಿ ರಸ್ತೆಯನ್ನು ದುರಸ್ತಿ ಪಡಿಸುವಂತೆ ಮನವಿ ಮಾಡಿದರು. ಸಚಿವ ವಿ ಸೋಮಣ್ಣ ಮಾತನಾಡಿ ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಮುಂದೆ ಹೋಗುತ್ತಿದ್ದಂತೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಕೆರೆಯಂತೆ ನಿಂತಿದ್ದ ನೀರನ್ನು ನೋಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಾಳೆ ಬೆಳಗ್ಗೆ ಒಳಗೆ ದುರಸ್ತಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಂತರ ಅಂಬೇಡ್ಕರ್ ನಗರದ ನಿವಾಸಿಗಳು ಸರ್ಕಲ್ ಮಧ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಈ ವೇಳೆ ಕೆ ಶಿಪ್ ವ್ಯವಸ್ಥಾಪಕ ಶಿವಕುಮಾರ್ ರವರ ಜೊತೆ ಜೊತೆ ಚರ್ಚಿಸಿದ ಸಚಿವ ವಿ ಸೋಮಣ್ಣ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸ್ಥಳೀಯ ನಿವಾಸಿಗಳ ಮನವಿಯಂತೆಯೇ ಕ್ರಮವಹಿಸಿ ಎಂದು ಸ್ಥಳದಲ್ಲೇ ಸೂಚಿಸಿದರು. ನೆರೆದಿದ್ದ ನಿವಾಸಿಗಳಿಗೆ ನಿಮ್ಮ ಮನವಿಯಂತೆ ಪ್ರತಿಮೆ ಸ್ಥಾಪಿಸುತ್ತೇವೆ ತಾವುಗಳು ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು, ಪಪಂ ಸದಸ್ಯ ಸಂಪತ್ ಕುಮಾರ್,ಮಾಜಿ ಸದಸ್ಯರುಗಳಾದ ಬಸವರಾಜು, ಸಿದ್ದರಾಜು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಹಾಜರಿದ್ದರು.





