ಅಂತರಸಂತೆ: ಉರುಳಿಗೆ ಸಿಲುಕಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಸಮೀಪದ ಜಮೀನು ಒಂದರಲ್ಲಿ ನಡೆದಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ತಾರಕ ಸಮೀಪ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 12-13 ವರ್ಷದ ಹೆಣ್ಣುಹುಲಿಯ ಕಳೇಬರ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಜಮೀನಿನಲ್ಲಿ ಕಾಡುಹಂದಿಗಾಗಿ ಹಾಕಿದ್ದ ಉರುಳಿಗೆ ಸಿಲುಕಿದ್ದ ಹುಲಿ ಸಾವನ್ನಪ್ಪಿರುವುದ ಬೆಳಕಿಗೆ ಬಂದಿದೆ. ಅಲ್ಲದೇ ಹುಲಿಗೆ ಮೂರು ಮರಿಗಳು ಸಹ ಇದ್ದು, ಸದ್ಯ ಮರಿಗಳ ರಕ್ಷಣೆಯ ದೃಷ್ಟಿಯಿಂದ ಮರಿಗಳ ಹುಡುಕಾಟದಲ್ಲಿ ಅರಣ್ಯ ಇಲಾಖೆ ತೊಡಗಿದೆ. ಸಧ್ಯ ಈಗಾಗಲೇ ಕೊಂಬಿಂಗ್ ಕಾರ್ಯಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಸುತ್ತಲು ಕ್ಯಾಮೆರಾ ಟ್ರಾಪ್ ಗಳನ್ನು ಅಳವಡಿಸಿದ್ದಾರೆ ಹುಡುಕಾಟ ಆರಂಭಿಸಿದ್ದಾರೆ.
ಬಳಿಕ ಪಶುವೈದ್ಯರಾರ ರಮೇಶ್ ಮತ್ತು ಪ್ರಸನ್ನ ರವರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅರಣ್ಯ ವ್ಯಾಪ್ತಿಯಲ್ಲಿ ಹುಲಿಯ ಮೃತದೇಹವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.
ಸ್ಥಳಕ್ಕೆ ನಾಗರಹೊಳೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ರಂಗಸ್ವಾಮಿ, ಗೌರವ ವನ್ಯಜೀವಿ ಪರಿಪಾಲಕಿ ಕೃತಿಕ ಆಲನಹಳ್ಳಿ, ವಲಯ ಅರಣ್ಯಾಧಿಕಾರಿಗಳಾದ ಸಿದ್ದರಾಜು, ಮಧು, ಹರ್ಷಿತ್ ಸೇರಿದಂತೆ ಎಸ್ ಟಿಪಿಎಫ್ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂತಾದವರು ಹಾಜರಿದ್ದರು.