Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಹಾರಾಜರು ಆರಂಭಿಸಿದ ‘ಓದುವ ಮನೆ’ಯೂ ಸೋರುತ್ತಿದೆ !  

ಕುವೆಂಪು, ಬಿಎಂಶ್ರೀ ಸಹಿತ ಹಲವರ ಓದಿಗೆ ಪ್ರೇರಕವಾದ ಮುಖ್ಯ ಗ್ರಂಥಾಲಯಕ್ಕೂ ಬೇಕಿದೆ ಕಾಯಕಲ್ಪ

ಜಯಶಂಕರ ಬದನಗುಪ್ಪೆ

ಮೈಸೂರು: ರಾಷ್ಟ್ರಕವಿ ಕುವೆಂಪು, ಬಿಎಂಶ್ರೀ ಸೇರಿದಂತೆ ನಾಡಿನ ಲಕ್ಷಾಂತರ ಜ್ಞಾನದಾಹಿಗಳಿಗೆ ನೆಚ್ಚಿನ ತಾಣವಾಗಿದ್ದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪ್ರಪ್ರಥಮ ಗ್ರಂಥಾಲಯವೆನಿಸಿದ ಕೇಂದ್ರ ಗ್ರಂಥಾಲಯದ ಪಾರಂಪರಿಕ ಕಟ್ಟಡದ ಕೆಲ ಭಾಗಕ್ಕೆ ಹಾನಿಯಾಗಿದ್ದು, ನುರಿತ ತಜ್ಞರಿಂದ ಕಾಯಕಲ್ಪದ ಅಗತ್ಯವಿದೆ.

ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗ್ರಂಥಾಲಯ ಆರಂಭಕ್ಕೆ ಕಟ್ಟಡ ಒದಗಿಸಿ ಮೈಸೂರಿಗರ ಜ್ಞಾನ ವಿಕಾಸಕ್ಕೆ ಕಾರಣರಾದರು. ನರಸರಾಜ ಕಂಠೀರವ ಒಡೆಯರ್ ಅವರು ೧೯೧೫ ಅಕ್ಟೋಬರ್‌ನಲ್ಲಿ ಈ ಗ್ರಂಥಾಲಯವನ್ನು ಉದ್ಘಾಟಿಸಿದರು.

ಕುವೆಂಪು ಅವರು ಕುಪ್ಪಳಿಯಿಂದ ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದಾಗ ಈ ಗ್ರಂಥಾಲಯಕ್ಕೆ ಬರುತ್ತಿದ್ದರು.ಕುವೆಂಪು ಅವರು ತಮ್ಮ ನೆನಪಿನ ದೋಣಿ ಕೃತಿಯಲ್ಲಿ ಕೇಂದ್ರ ಗ್ರಂಥಾಲಯ ಮತ್ತು ತಾವು ಕುಳಿತು ಓದುತ್ತಿದ್ದ ಕೊಠಡಿ ಬಗ್ಗೆ ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ.ಕುವೆಂಪು ಕಾರ್ನರ್ ಎಂದು ಹೆಸರಿಡಲಾದ ಈ ಕೊಠಡಿ ಮತ್ತು ಗೋಡೆ ಮೇಲ್ಭಾಗ ತೇವಾಂಶದಿಂದ ಕೂಡಿದ್ದು, ಸೇವೆ ನಿಲ್ಲಿಸಿ ಪ್ರವೇಶ ನಿಷೇಧಿಸಲಾಗಿದೆ.

೧೯೬೫ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಅಸ್ತಿತ್ವಕ್ಕೆ ಬಂದ ನಂತರ ಗ್ರಂಥಾಲಯ ಇಲಾಖೆಗೆ ಈ ಗ್ರಂಥಾಲಯ ನಿರ್ವಹಣೆ ಹಸ್ತಾಂತರಗೊಂಡಿತು. ಪ್ರಸ್ತುತ ಈ ಕಟ್ಟಡದ ಕೆಲವು ಭಾಗದಲ್ಲಿ ಮಳೆಯಿಂದ ಸೋರುತ್ತಿದ್ದು, ಅಭದ್ರತೆ ಉಂಟುಮಾಡಿದೆ. ಗೋಡೆಗಳು ತೇವಾಂಶದಿಂದ ಕೂಡಿವೆ. ತಾರಸಿ ಸೋರುತ್ತದೆ. ಮಳೆಗಾಲದಲ್ಲಿ ಸೋರಿಕೆ ತೀವ್ರವಾಗಿರುತ್ತದೆ. ಅಮೂಲ್ಯ ಪುಸ್ತಕಗಳು ರಕ್ಷಣೆಯಿಲ್ಲದೆ ಹಾಳಾಗುವ ಪರಿಸ್ಥಿತಿ ಒದಗಿ ಬಂದಿದೆ. ಕಟ್ಟಡ ಗಟ್ಟಿ ಇದ್ದರೂ ನಿರ್ವಹಣೆಯಲ್ಲಿ ವೈಫಲ್ಯತೆ ಎದ್ದುಕಾಣುತ್ತಿದೆ.

ಈ ಕಟ್ಟಡ ಸಂರಕ್ಷಣೆ ಒಂದು ಸವಾಲಾಗಿದ್ದು, ಇದರ ಸಮರ್ಪಕ ನಿರ್ವಹಣೆಗಾಗಿ ಪಾರಂಪರಿಕ ಇಲಾಖೆ ಆಯುಕ್ತರಿಗೆ, ಪಿಡಬ್ಲುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸರ್ಕಾರದ ಗಮನಕ್ಕೆ ತರಲಾಗಿದೆ. ಕಿತ್ತುಹೋಗಿದ್ದ ಕಟ್ಟಡದ ಕೆಲವು ಭಾಗಗಳಿಗೆ ಸಾಮಾನ್ಯ ಗುತ್ತಿಗೆದಾರರಿಂದ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆಯಾದರೂ ಇದರಿಂದ ಪ್ರಯೋಜನವಾಗಿಲ್ಲ.

ಪ್ರತಿ ವರ್ಷ ಸಾಮಾನ್ಯ ಗುತ್ತಿಗೆದಾರರಿಂದ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ. ದುರಸ್ತಿಗೆಂದು ಕ್ರಿಯಾಯೋಜನೆ ಮಾಡಿ ಲಕ್ಷಾಂತರ ರೂ. ವ್ಯಯಿಸುವುದು ನಿರರ್ಥಕವಾಗುತ್ತಿದೆ. ಯೋಜಿತ ಕಾರ್ಯ ನಡೆಯುತ್ತಿಲ್ಲ. ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಬೋರ್ಡ್‌ಗೆ ದುರಸ್ತಿ ಕೆಲಸ ವಹಿಸಿದರೆ ಒಳಿತು. ಅಲ್ಲದೆ ಪ್ರತಿ ವರ್ಷ ದುರಸ್ತಿ ನೆಪದಲ್ಲಿ ಆಗುತ್ತಿರುವ ಲಕ್ಷಾಂತರ ರೂ. ಖರ್ಚು ಉಳಿಯುತ್ತದೆ ಎಂಬ ಮಾತು ಹಲವು ವರ್ಷಗಳಿಂದ ಗ್ರಂಥಾಲಯಕ್ಕೆ ಓದಲು ಬರುತ್ತಿರುವವರಿಂದ ಕೇಳಿಬಂತು.

ಈ ಹಿಂದೆ ಈ ಕಟ್ಟಡ ನಿರ್ವಹಣೆ ಕುರಿತು ಬರೆದಿದ್ದ ಪತ್ರಗಳಿಗೆ ಸ್ಪಂದನೆ ಸಿಕ್ಕಿದೆ. ಅನುಭವಿಗಳಿಂದ ದುರಸ್ತಿ ಮಾಡಿಸಿದರೆ ಶಾಶ್ವತ ಪರಿಹಾರ ಸಿಗಲಿದೆ ಎಂಬ ಉದ್ದೇಶದಿಂದ ಕೆಆರ್‌ಐಡಿಎಲ್‌ಗೆ ನಿರ್ವಹಣೆ ವಹಿಸಲು ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಯವರಿಗೆ ಪತ್ರ ಬರೆಯಲಾಗಿದೆ. ಅವರಿಂದ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದೇವೆ. – ಬಿ.ಮಂಜುನಾಥ್. ಉಪನಿರ್ದೇಶಕರು. ಸಾರ್ವಜನಿಕ ಗ್ರಂಥಾಲಯ ಇಲಾಖೆ

  • ೧೯೧೫ ಅಕ್ಟೋಬರ್‌ನಲ್ಲಿ ಗ್ರಂಥಾಲಯ ಉದ್ಘಾಟನೆ.
  • ಗ್ರಂಥಾಲಯ ನಿರ್ವಹಣೆ ಸಮಿತಿಯಲ್ಲಿ ಡಾ.ಎಸ್.ರಾಧಾಕೃಷ್ಣನ್, ಸರ್ ಎಂ.ವಿಶ್ವೇಶ್ವರಯ್ಯ ಇದ್ದರು.
  • ಕುವೆಂಪು, ಬಿಎಂಶ್ರೀ ಅವರಂತಹ ಓದಿದ ತಾಣ.
  • ದುರಸ್ತಿಗೆಂದು ಎಸ್ಟಿಮೇಟ್ ಮಾಡಿ ಲಕ್ಷಾಂತರ ರೂ. ವ್ಯಯಿಸುವುದು ನಿರರ್ಥಕ

 

 

 

 

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ