Mysore
17
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ದೂರು ಮೂಟೆ ಹೊತ್ತು ಪಾಲಿಕೆ ಅದಾಲತ್ ಅಂತ್ಯ

ಮೇಯರ್ ಅಧ್ಯಕ್ಷತೆಯಲ್ಲಿ 8,9 ರ ಕಚೇರಿಯಲ್ಲಿ ಅದಾಲತ್; ಅಹವಾಲುಗಳ ಸುರಿಮಳೆ

ಮೈಸೂರು: ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ನಗರಪಾಲಿಕೆ ವಲಯವಾರು ಆರಂಭಿಸಿರುವ ಅದಾಲತ್‌ನ್ನು ಮಂಗಳವಾರ ವಲಯ ಕಚೇರಿ ೮ರ ಉದಯಗಿರಿ ಮತ್ತು 9ರ ಗಾಯತ್ರಿಪುರಂ ಕಚೇರಿಯಲ್ಲಿ ಮಹಾಪೌರ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಸಿದಾಗ ಅವಹಾಲುಗಳ ಮಹಾಪೂರವೇ ಹರಿದುಬಂದಿತು.

ವಲಯ ಕಚೇರಿ ೮ರಲ್ಲಿ ನಡೆದ ಅದಾಲತ್‌ನಲ್ಲಿ ಅಹವಾಲು ಸಲ್ಲಿಸಿದ ರಾಘವೇಂದ್ರನಗರದ ನಿವಾಸಿ ಮುದ್ದಯ್ಯ ಎಂಬವರು, ನೀರಿನ ಬಾಕಿಯನ್ನು ಒಂದೇ ಕಂತಿನಲ್ಲಿ ಕಟ್ಟಲು ಹೇಳಿರುವುದರಿಂದ ತುಂಬಾ ತೊಂದರೆಯಾಗಿದೆ. ೨೦ ಸಾವಿರ ರೂ. ಬಾಕಿ ಇರುವುದರಿಂದ ಒಂದೇ ಕಂತಿನಲ್ಲಿ ಕಟ್ಟಲು ಸಾಧ್ಯವಿಲ್ಲ. ಎರಡು-ಮೂರು ಕಂತುಗಳಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದೇ ರೀತಿ ೧೦ರಿಂದ ೨೫ ಸಾವಿರ ರೂ.ವರೆಗೂ ಬಿಲ್ ಬಾಕಿ ಉಳಿಸಿಕೊಂಡಿರುವ ರಾಮಸ್ವಾಮಿ, ಮುನಿರಾಜು, ಮಾದಮ್ಮ ಎಂಬವರೂ ಮೂರ್ನಾಲ್ಕು ಕಂತಿನಲ್ಲಿ ಬಾಕಿ ಪಾವತಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಹಾಪೌರರು ಆಯುಕ್ತರು ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವಕಾಶ ಇದ್ದಲ್ಲಿ ಎರಡು-ಮೂರು ಕಂತುಗಳಲ್ಲಿ ಪಾವತಿಗೆ ಅವಕಾಶ ಕೊಡಲಾಗುವುದು ಎಂದು ಭರವಸೆ ನೀಡಿದರು.

ಕುಡಿಯುವ ನೀರಿನ ಮೀಟರ್‌ಗಳನ್ನು ಬದಲಿಸದೆ ಬಿಲ್ ಹೆಚ್ಚಾಗಿ ಬರುತ್ತಿರುವ ದೂರನ್ನು ಪರಿಗಣಿಸಿದ ಮಹಾಪೌರರು, ಹಳೆಯ ಪ್ರದೇಶಗಳಲ್ಲಿ ಅಳವಡಿಸಿರುವ ಮೀಟರ್‌ಗಳಲ್ಲಿ ತಾಂತ್ರಿಕ ದೋಷವಿದ್ದಲ್ಲಿ ಅದನ್ನು ಬದಲಾಯಿಸಬೇಕು. ನಿಗದಿಗಿಂತ ಜಾಸ್ತಿ ಬಂದಿರುವ ಬಿಲ್‌ಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿ ಸೂಚನೆ ನೀಡಿದರು. ಗಾಯತ್ರಿಪುರಂ ನಿವಾಸಿ ತಂಗಮಣಿ ಎಂಬವರು ಪೌರಕಾರ್ಮಿಕರ ಕಾಲೋನಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು, ದೂರದ ಬಡಾವಣೆಗಳಿಗೆ ಸ್ವಚ್ಛತಾ ಕಾರ್ಯಕ್ಕೆ ಹೋಗುವವರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕ್ಯಾತಮಾರನಹಳ್ಳಿಯ ನಿವಾಸಿಯೊಬ್ಬರು ಯುಜಿಡಿ ಲೇನ್ ಒಡೆದರೆ ತಕ್ಷಣ ಬಂದು ದುರಸ್ತಿಪಡಿಸುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ದುರ್ವಾಸನೆಯಲ್ಲೇ ಓಡಾಡುವಂತಾಗಿದೆ ಎಂದು ದೂರಿದರು. ಆಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಹಾಪೌರರು, ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

ತಂದೆ ಹೆಸರಿನಲ್ಲಿರುವ ಆಸ್ತಿಯ ಖಾತೆಯನ್ನು ಬದಲಾಯಿಸಿಕೊಡಲು ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದರೂ ಆರು ತಿಂಗಳಿಂದ ಮಾಡಿಕೊಟ್ಟಿಲ್ಲ. ನಾವು ಕೆಲಸ ಬಿಟ್ಟು ಎಷ್ಟು ದಿನ ಅಲೆಯುವುದು ಎಂದು ಸೀತಮ್ಮ ಎಂಬವರು ಅಳಲು ತೋಡಿಕೊಂಡರು. ಇದರಿಂದ ಅಸಮಾಧಾನಗೊಂಡ ಮಹಾಪೌರರು ಖಾತೆ ವಿಭಾಗದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡು, ಮೂರು ದಿನಗಳಲ್ಲಿ ಇತ್ಯರ್ಥಪಡಿಸುವಂತೆ ಸೂಚಿಸಿದರು.

ಉಪ ಮಹಾಪೌರರಾದ ಡಾ.ಎಂ.ಜಿ.ರೂಪಾ, ಸದಸ್ಯರಾದ ಶ್ರೀಧರ್, ಎಚ್.ಎಂ.ಶಾಂತಕುಮಾರಿ, ಉಷಾ ನಾರಾಯಣಪ್ಪ, ಸಾತ್ವಿಕ್, ಸಾವುದ್ ಖಾನ್, ಪುಷ್ಪಲತಾ ಜಗನ್ನಾಥ್, ಬಷೀರ್ ಅಹ್ಮದ್, ಅಯಾಜ್ ಪಾಷ, ವಲಯ ಆಯುಕ್ತರಾದ ಶಿವಕುಮಾರ್, ಕೃಷ್ಣ ಇನ್ನಿತರರು ಹಾಜರಿದ್ದರು.


ಸಾರ್ವಜನಿಕ ಅಹವಾಲುಗಳೇನು?

* ಕಂತುಗಳಲ್ಲಿ ಅಸಲು ಪಾವತಿಗೆ ಅವಕಾಶ ಕೊಡಿ

* ನೀರಿನ ಮೀಟರ್ ಪರಿಶೀಲಿಸಿ

* ಹಾಳಾಗಿರುವ ಒಳಚರಂಡಿ ಸರಿಪಡಿಸಿ

* ಖಾತೆ ಮಾಡಿಕೊಡಲು ಅರ್ಜಿ ಕೊಟ್ಟು ಆರು ತಿಂಗಳಾದರೂ ಖಾತೆ ಬದಲಾಗಿಲ್ಲ

* ಕಚೇರಿಗೆ ಮನೆ ಕಂದಾಯ ಕಟ್ಟಲು ಬಂದರೂ ಸಿಬ್ಬಂದಿ ಸಿಗುವುದೇ ಇಲ್ಲ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!