Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಟನ್ ಕಬ್ಬಿಗೆ 5,500 ರೂ. ನೀಡಲು ಆಗ್ರಹ

ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ರೈತರಿಂದ ಅನಿರ್ದಿಷ್ಟ ಪ್ರತಿಭಟನೆ ಆರಂಭ
ಚಾಮರಾಜನಗರ: ಎಂಎಸ್‌ಪಿ ದರದಲ್ಲಿ ಕೃಷಿ ಉತ್ಪನ್ನಗಳ ಖರೀದಿ, ಟನ್ ಕಬ್ಬಿಗೆ ೫೫೦೦ರೂ. ನಿಗದಿ, ವಿದ್ಯುತ್ ಬಾಕಿ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಅನಿರ್ದಿಷ್ಟ ಪ್ರತಿಭಟನೆ ಆರಂಭಿಸಿದರು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಭಾಗ್ಯಜ್ಯೋತಿ, ಕುಠೀರಜ್ಯೋತಿ ಸೇರಿದಂತೆ ಕರ ನಿರಾಕರಣೆ ಸಂದರ್ಭದಲ್ಲಿ ಉಳಿಸಿಕೊಂಡಿರುವ ಗೃಹಬಳಕೆಯ ವಿದ್ಯುತ್ ಬಾಕಿಯ ನ್ನು ಸಂಪೂರ್ಣ ಮನ್ನಾ ಮಾಡಬೇಕು. ಹಾಗೆೆಯೇ ವಿದ್ಯುತ್ ತಿದ್ದುಪಡಿ ಕಾಯಿದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಕೊಟ್ಟಿದ್ದ ಭರವಸೆಯನ್ನು ಹುಸಿಗೊಳಿಸಿದೆ. ಈ ಕಾಯಿದೆುಂನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಎಂಎಸ್‌ಪಿ ದರದಲ್ಲಿ ಕೃಷಿ ಉತ್ಪನ್ನಗಳನ್ನು ಕೊಳ್ಳಲು ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರಿಗೆ ವಿವಿಧ ಯೋಜನೆಯಡಿ  ನೀಡಲಾಗುತ್ತಿರುವ ಸಹಾಯಧನವನ್ನು ಸಾಲದ ಕಂತಿಗೆ ಜಮೆ ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಖಾಸಗಿ ಲೇವಾದೇವಿದಾರರು, ಗಿರವಿದಾರರು, ಮೈಕ್ರೋ ಫೈನಾನ್ಸ್ ಕಂಪನಿಗಳವರು ನಿಗಧಿಗಿಂತ ಅಧಿಕ ಬಡ್ಡಿುಂನ್ನು ರೈತರಿಂದ ವಸೂಲಿ ಮಾಡಿ ಶೋಷಣೆ ಮಾಡುತ್ತಿದ್ದರು ಅಧಿಕಾರಿಗಳು ಮೌನವಹಿಸಿರುವುದು ದುರದೃಷ್ಟಕರ. ಈ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಳೆಯ ನಡುವೆಯೂ ಪ್ರತಿಭಟನೆ ಮುಂದುವರಿಸಿದ್ದಾರೆ.
ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಹಕಾರ, ಆಹಾರ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮಸ್ಯೆ ಆಲಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ಮಂಡ್ಯ ಪ್ರಸನ್ನಗೌಡ, ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ತಾಲ್ಲೂಕು ಅಧ್ಯಕ್ಷ ದೇಮಹಳ್ಳಿ ಪ್ರಸಾದ್, ಮುಖಂಡರಾದ ಶೈಲೇಂದ್ರ, ಬಸವರಾಜಪ್ಪ, ಮೂಡ್ನಾಕೂಡು ಮಹೇಶ್, ಹೊನ್ನೇಗೌಡನಹುಂಡಿ ಸಿದ್ದರಾಜು, ಉಮ್ಮತ್ತೂರು ಲಿಂಗರಾಜು, ಎ.ಎಂ.ಜಯಣ್ಣ,ಕಾಡಳ್ಳಿಚಿನ್ನಸ್ವಾಮಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಕಬ್ಬು ಕಟಾವು ಭರವಸೆ
೧೬ ತಿಂಗಳಾದರೂ ತಮ್ಮ ಕಬ್ಬು ಕಟಾವಿಗೆ ಅನುಮತಿ ನೀಡಿಲ್ಲ. ಇದರಿಂದ ನಷ್ಟವಾಗುತ್ತಿದೆ ಎಂದು ರೈತ ಕೆರೆಹಳ್ಳಿ ಮಹೇಶ್ ಧರಣಿ ಸಂದರ್ಭದಲ್ಲಿ ದೂರಿದರು. ಕೂಡಲೇ ಕಾರ್ಖಾನೆಯಿಂದ ಕಟಾವಿಗೆ ಅನುಮತಿ ಕೊಡಿಸುವುದಾಗಿ ಆಹಾರ ಇಲಾಖೆ ಅಧಿಕಾರಿ ಭರವಸೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ