ಮೈಸೂರು: ಶಾಲಾ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳು ಸಂಚಾರ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುವುದನ್ನು ಕಲಿಯಬೇಕು. ಇಲ್ಲವಾದರೆ ಭವಿಷ್ಯದಲ್ಲಿ ನಿಮಗೆ ಕಾನೂನು ಪಾಲನೆಯ ಶಿಸ್ತು ಮೂಡುವುದು ಕಷ್ಟವಾಗುತ್ತದೆ ಎಂದು ಕೃಷ್ಣರಾಜ ಸಂಚಾರ ಠಾಣೆಯ ಸಹಾಯಕ ಪೊಲೀಸ್ ಇನ್ಸಪೆಕ್ಟರ್ ವೆಂಕಟೇಶ್ ಹೇಳಿದರು.
ಮಂಗಳವಾರ ನಗರದ ಕುವೆಂಪುನಗರದಲ್ಲಿರುವ ಕಾವೇರಿ ವಿದ್ಯಾ ಸಂಸ್ಥೆ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸಂಚಾರ ನಿಯಮಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳಾದ ನಿಮಗೆ ಸಂಚಾರ ನಿಯಮಗಳ ಸ್ಪಷ್ಟ ಅರಿವಿರುತ್ತದೆ. ಹೀಗಿದ್ದರೂ ನಿಯಮಗಳನ್ನು ಪಾಲಿಸುವುದಿಲ್ಲ. ಸಿಗ್ನಲ್ ಜಂಪ್, ಮೂವರು ಕುಳಿತು ವಾಹನ ಚಾಲನೆ ಮಾಡುವುದು, ಹೆಲ್ಮೆಟ್ ಧರಿಸದೆ ವಾಃನ ಚಾಲನೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೀರಿ. ನಿಮ್ಮ ನಡೆ ಸರಿಯೇ ಎಂದು ಯೋಚಿಸಿ ಎಂದರು.
ಪೋಷಕರು ನೀವು ಚೆನ್ನಾಗಿ ಓದಲಿ, ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲಿ ಎಂಬ ಉದ್ದೇಶದಿಂದ ವಾಹನ ಕೊಡಿಸಿರುತ್ತಾರೆ. ಆದರೆ, ನೀವು ಕಾಲೇಜಿಗೆ ತೆರಳುವ ಬದಲು ಮೂವರು ಸ್ನೇಹಿತರನ್ನು ಒಂದೇ ವಾಹನದಲ್ಲಿ ಕುಳ್ಳಿರಿಸಿಕೊಂಡು ನಗರ ಪ್ರದಕ್ಷಣೆ ಹಾಕುತ್ತೀರಿ. ಇಂತಹ ಸಂದರ್ಭದಲ್ಲಿ ಅಪಘಾತವಾದಲ್ಲಿ ನಿಮ್ಮ ಹಾಗೂ ನಿಮ್ಮ ಸ್ನೇಹಿತರ ಕುಟುಂಬ ಸಂಕಷ್ಟಕ್ಕೊಳಗಾಗುತ್ತದೆ ಎಂಬುದರ ಅರಿವು ನಿಮಗಿರಬೇಕು ಎಂದು ಹೇಳಿದರು.
ಇನ್ನು ವಾಹನ ಚಾಲನಾ ಪರವಾನಗಿ ಪಡೆಯದೇ ಕೆಲವರು ವಾಹನ ಚಾಲನೆ ಮಾಡುತ್ತೀರಿ. ಇದು ಕಾನೂನಿನ ಪ್ರಕಾರ ಅಪರಾಧವಾಗುತ್ತೆ. ಒಂದು ವೇಳೆ ಅಪಘಾತ ಸಂಭವಿಸಿದಲ್ಲಿ ನೀವು ಮಾಡಿದ ತಪ್ಪಿಗೆ ನಿಮ್ಮ ಪೋಷಕರು ದಂಡ ತೆರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವಾಹನ ಮಾಲೀಕರಿಗೆ ೬ ತಿಂಗಳ ಸಜೆ ಅಥವ ೨೫ ಸಾವಿರ ರೂ. ವರೆಗೂ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿದೆ ಎಂದು ಎಚ್ಚರಿಕೆ ನೀಡಿದರು.
ನೀವುಗಳು ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ನಾವು ದಂಡ ವಿಧಿಸುತ್ತೇನೆ. ಈ ಕಾರಣಕ್ಕೆ ಕೆಲವರು ನಮ್ಮ ಮೇಲೆ ಬೇಸರ ವ್ಯಕ್ತಪಡಿಸುತ್ತಾರೆ. ಆ ಹಣವನ್ನು ನಾವು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಸರ್ಕಾಋ ಸೂಚನೆ ನೀಡಿದಂತೆ ನಾವು ಕೆಲಸ ಮಾಡಬೇಕು. ನಿಯಮಗಳನ್ನು ಪಾಲಿಸಿದಲ್ಲಿ ಯಾರೂ ಕೂಡ ನಿಮಗೆ ದಂಡ ವಿಧಿಸಲು ಸಾಧ್ಯವಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕೆ.ಆರ್. ಸಂಚಾರ ಠಾಣೆಯ ಎಸ್ಐ ಮದನಕುಮಾರ್, ವೇದಿಕೆಯ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಸತೀಶ್, ಮಹಿಳಾ ವಿಭಾಗದ ಅಧ್ಯಕ್ಷೆ ಕವಿತ, ಕಾಲೇಜಿನ ಪ್ರಾಂಶುಪಾಲರಾದ ಪದ್ಮಾವತಿ, ಹೆಡ್ ಕಾನ್ಸಟೆಬಲ್ ರಾಜು ಮುಂತಾದವರು ಹಾಜರಿದ್ದರು.





