ಹನೂರು: ಕುರಿ ಕಳ್ಳತನ ಮಾಡಿದ್ದ ಆರೋಪಿ ಹಾಗೂ ಕುರಿಯನ್ನು ವಶಕ್ಕೆ ಪಡೆಯುವಲ್ಲಿ ರಾಮಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಪುದುರಾಮಾಪುರ ಗ್ರಾಮದ ವಿಶ್ವ ಅಲಿಯಾಸ್ ವಿಜಿ ಬಂಧಿತ ಆರೋಪಿಯಾಗಿದ್ದಾನೆ .
ಘಟನೆ ವಿವರ :ತೋಟದ ಜಮೀನಿನ ಮುಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿದ್ದ 6ಸಾವಿರ ಮೌಲ್ಯದ 2ಗಂಡು ಕುರಿ ಕಳ್ಳತನವಾಗಿರುವ ಬಗ್ಗೆ ಮಣಿಕಂಠ ಎಂಬುವವರು ರಾಮಾಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಪ್ರಸಾದ್, ವೃತ್ತ ನಿರೀಕ್ಷಕ ನಂಜುಂಡಸ್ವಾಮಿ ರವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದಾಗ, ಭಾನುವಾರ ರಾಮಪುರ ಗ್ರಾಮದಲ್ಲಿ ಜರುಗುವ ಭಾನುವಾರದ ವಾರದ ಸಂತೆಗೆ ka-05 jq0280 ಪಲ್ಸರ್ ಮೋಟಾರ್ ಬೈಕ್ ನಲ್ಲಿ 2 ಕುರಿಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಬಂದಿದ್ದ ಆರೋಪಿ ವಿಶ್ವನನ್ನು ವಿಚಾರಣೆ ನಡೆಸಿದಾಗ ಕುರಿಗಳನ್ನು ಕಳ್ಳತನ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡ ಹಿನ್ನೆಲೆ ಮೋಟಾರ್ ಬೈಕ್ ಹಾಗೂ ಕುರಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೇದೆಗಳಾದ ಸೈಯದ್ ಮುಶ್ರಫ್, ರಮೇಶ್ ಕುಮಾರ್ ಲಿಯಾಕತ್ ಅಲಿ ಖಾನ್ ಪಾಲ್ಗೊಂಡಿದ್ದರು.





