Mysore
20
overcast clouds
Light
Dark

ದೇಶದಲ್ಲಿ ಸಂಶೋಧನೆಗೆ ಉತ್ತೇಜನ ಸಿಗುತ್ತಿಲ್ಲ : ಪ್ರೊ.ರಂಗಪ್ಪ ಬೇಸರ

ಮೈಸೂರು: ಕ್ಯಾನ್ಸರ್, ಅಲ್ಜೈಮರ್ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ವಿದೇಶಿ ಔಷಧಗಳನ್ನು ಅವಲಂಬಿಸುವ ಬದಲಿಗೆ ದೇಶದಲ್ಲೇ ಔಷಧ ತಯಾರುಮಾಡಬೇಕು. ಆದರೆ, ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯಲು ಉತ್ತೇಜನ ಸಿಗದ ಕಾರಣ ಸಂಶೋಧಕರು ವಿದೇಶಗಳಿಗೆ ಪಲಾಯನ ಮಾಡುವಂತಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೇಟ್ ಅಕಾಡೆಮಿಕ್, ಸೆಂಟ್ರಲ್ ಅಕಾಡೆಮಿಕ್‌ನಂತೆ ಇಂಟರ್ ನ್ಯಾಷನಲ್ ಅಕಾಡೆಮಿಯಂತೆ ಪ್ರಪಂಚದಲ್ಲೇ ಗಮನಸೆಳೆದಿರುವ ದಿ ವಲ್ಡ್ ರ್ ಅಕಾಡೆಮಿ ಆಫ್ ಸೈನ್ಸಸ್ ಫೆಲೋಶಿಪ್ ದೊರೆತಿರುವುದು ನೋಬಲ್ ಪ್ರಶಸ್ತಿಗಿಂತಲೂ ದೊಡ್ಡದು ಎಂದು ಸಂತಸ ವ್ಯಕ್ತಪಡಿಸಿದರು. ೧೬ ದೇಶಗಳ ಪ್ರತಿನಿಧಿಗಳು ಕುಳಿತು ಆಯ್ಕೆ ಮಾಡುವ ಸಮಿತಿಯಲ್ಲಿ ತಾವು ಮಾಡಿರುವ ಸಾಧನೆ, ಸಂಶೋಧನೆಯನ್ನು ಗುರುತಿಸಿ ನೀಡಲಾಗಿದೆ. ೨೦೨೨ರಲ್ಲಿ ಭಾರತದಲ್ಲಿ ಒಬ್ಬರನ್ನೇ ಆಯ್ಕೆ ಮಾಡಲಾಗಿದೆ. ಸಹಜವಾಗಿ ಮೈಸೂರು ವಿವಿ, ಕರ್ನಾಟಕಕ್ಕೆ ದೊಡ್ಡ ಹೆಸರು ದೊರೆತಿದೆ ಎಂದರು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿಜ್ಞಾನವನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು ಎನ್ನುವ ಚಿಂತನೆ ಮಾಡಲಾಗುತ್ತಿದೆ. ಅದೇರೀತಿ ಭಾರತದಲ್ಲೂ ಆಗಬೇಕು. ಇತ್ತೀಚಿನ ದಿನಗಳಲ್ಲಿ ಬೋಧಕ ಸಿಬ್ಬಂದಿ ಇಲ್ಲದ ಕಾರಣ ಸಂಶೋಧನೆಗಳು ನಡೆಯುತ್ತಿಲ್ಲ. ಭಾರತದಲ್ಲಿ ಪತ್ತೆ ಮಾಡಿದ ಕೋವ್ಯಾಕ್ಸಿನ್ ಇಡೀ ಜಗತ್ತಿಗೆ ಬಳಕೆಯಾಯಿತು. ಅದೇ ರೀತಿ ಕ್ಯಾನ್ಸರ್ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಬೇರೆ ದೇಶಗಳನ್ನು ಅವಲಂಬಿಸದೆ ನಮ್ಮಲ್ಲಿ ಕಂಡುಹಿಡಿಯಬೇಕು ಎಂದು ಹೇಳಿದರು. ವಿಜ್ಞಾನ ಕ್ಷೇತ್ರಕ್ಕೆ ಸರಿಯಾದ ಪ್ರೋತ್ಸಾಹ,ಉತ್ತೇಜನ ದೊರೆಯುತ್ತಿಲ್ಲ. ನಾವು ಸರ್ಕಾರಕ್ಕೆ ಸಲಹೆಗಳನ್ನು ನೀಡಬಹುದು. ಅದನ್ನು ಸ್ವೀಕರಿಸಿ ಅನುಷ್ಠಾನಗೊಳಿಸುವುದು ಸರ್ಕಾರದ ಹೊಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ