Mysore
20
overcast clouds
Light
Dark

ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಯಣ ಸರ್ವ ಸಜ್ಜು

ಜಾನಪದ ಸಂಭ್ರಮದೊಂದಿಗೆ ಇಂದು ಆರಂಭ: ಡಿ.೧೦ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ

ಮೈಸೂರು: ದಕ್ಷಿಣಭಾರತದಲ್ಲೇ ಪ್ರತಿಷ್ಠಿತ ರೆಪರ್ಟರಿ ಎನ್ನಿಸಿಕೊಂಡಿರುವ ಕರ್ನಾಟಕ ರಂಗಾಯಣ ಮೈಸೂರು ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಸಂಘಟಿಸಿದೆ. ಕುಕ್ಕರಹಳ್ಳಿ ಕೆರೆ ದಡದಲ್ಲಿರುವ ರಂಗಾಯಣ ಅಂಗಳದಲ್ಲಿ ಭಾರತೀಯತೆ ಶೀಷಿಕೆಯಡಿ ಡಿ. ೮ರಿಂದ ೧೫ರವರೆಗೆ ರಂಗ ಸಂಭ್ರಮ ಕಳೆಗಟ್ಟಿಲಿದೆ.

ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಯಣ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ನಾಟಕೋತ್ಸವದ ಮುನ್ನವೇ ಹಬ್ಬದ ಸಂಭ್ರಮ ಮನೆ ಮಾಡಿದೆ. ಕಲಾವಿದರು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಡಿ. ೮ರಂದು ಜನಪದ ಉತ್ಸವ ಆರಂಭದೊಂದಿಗೆ ರಾಷ್ಟ್ರೀಯ ನಾಟಕೋತ್ಸವ ವಿಧ್ಯುಕ್ತವಾಗಿ ಚಾಲನೆ ಪಡೆದುಕೊಳ್ಳಲಿದೆ.

ರಂಗಾಯಣದ ಆವರಣದಲ್ಲಿ ಕಾವಾದ ವಿದ್ಯಾರ್ಥಿಗಳು ಬಹುರೂಪಿ ಶೀರ್ಷಿಕೆಯ ಭಾರತೀಯತೆ ಶಬ್ಧದ ವಿಶಾಲಾರ್ಥವನ್ನು ಕ್ಯಾನ್ವಾಸ್‌ನಲ್ಲಿ ಮೂಡಿಸುವಲ್ಲಿ ನಿರತರಾಗಿದ್ದಾರೆ. ಮನೆ ಮನೆಗೆ ರಂಗಾಯಣ ಮನ ಮನಕೆ ಆಶಯದಲ್ಲಿ ಪ್ರಚಾರ ನಡೆಸಲಾಗಿದೆ.

೧೦೦ ಕಲಾವಿದರು ಭಾಗಿ: ಬಹುರೂಪಿಯ ಸಿದ್ಧತೆಯಲ್ಲಿ ೧೦೦ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದಾರೆ. ನವಿಲು ರಾಷ್ಟ್ರೀಯ ಪ್ರಾಣಿ. ನವಿಲು ನೃತ್ಯದ ಸಂಕೇತವೂ ಹೌದು. ನೃತ್ಯ ಅಂದರೆ ನಾಟಕ. ನವಿಲು ಪಕ್ಷಿಯ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸಂಸ್ಕೃತಿ ತುಂಬಿಕೊಂಡಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ನಾಳೆಯಿಂದ ನಾಟಕ ಪ್ರದರ್ಶನ: ೭ ರಾಜ್ಯಗಳ ೭ ವಿವಿಧ ಭಾಷೆಗಳ ನಾಟಕಗಳು, ಕರ್ನಾಟಕದ ೧೨ ಕನ್ನಡದ ನಾಟಕಗಳು ಮತ್ತು ತುಳು ನಾಟಕವು ಸೇರಿ ಒಟ್ಟು ೨೦ ನಾಟಕಗಳು ಪ್ರದರ್ಶನಗೊಳ್ಳಲಿವೆ. ಜತೆಗೆ ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ಪ್ರದರ್ಶನ, ದೇಸಿ ಆಹಾರ ಮೇಳ, ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರ ಆಯೋಜಿಸಲಾಗಿದೆ.

ಪುನೀತ್ ಚಿತ್ರಮಂದಿರ: ಡಿ. ೯ರಂದು ರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಗುವುದು. ಶ್ರೀರಂಗ ವೇದಿಕೆಗೆ ಪುನೀತ್ ರಾಜ್‌ಕುಮಾರ್ ನಾಮಕರಣ ಮಾಡಿ ಗೌರವ ಸಲ್ಲಿಸಲಾಗುತ್ತಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಹಿರಿಯ ನಟ ದೊಡ್ಡಣ್ಣ ಭಾಗವಹಿಸಲಿದ್ದಾರೆ.

ಡಿ. ೧೦ ಮತ್ತು ೧೧ರಂದು ಸನಾತನ ಧರ್ಮ ಮತ್ತು ಭಾರತೀಯತೆ ಭವಿಷ್ಯದಲ್ಲಿ ಭಾರತೀಯ ಸಂಸ್ಕೃತಿ ವಿಚಾರಗಳ ಮೇಲೆ ಚರ್ಚೆ ನಡೆಯಲಿದೆ. ಪದವಿ ವಿದ್ಯಾರ್ಥಿಗಳಿಗೆ ವೈವಿಧ್ಯತೆಯಲ್ಲಿ ಭಾರತೀಯತೆ ವಿಷಯದ ಭಾಷಣ ಸ್ಫರ್ಧೆ ಏರ್ಪಡಿಸಲಾಗಿದೆ.

ವಿಚಾರ ಸಂಕಿರಣದಲ್ಲಿ ಲೇಕಕಿ ಡಾ.ಎಸ್.ಆರ್.ಲೀಲಾ, ನಾಟಕಕಾರ ಎಸ್.ಎನ್. ಸೇತುರಾಮ್, ವಾಗ್ಮಿ ಡಾ.ಬಿ.ವಿ.ಆರತಿ, ರಮಾನಂದ ಐನಕೈ, ಸಾಹಿತಿ ಬಾಬು ಕೃಷ್ಣಮೂರ್ತಿ, ಸಂಸ್ಕೃತಿ ಚಿಂತಕ ಸು.ರಾಮಣ್ಣ ಭಾಗವಹಿಸಲಿದ್ದಾರೆ.

೧೦ರಂದು ಸಿಎಂ ಆಗಮನ:

ಡಿ. ೧೦ರಂದು ಸಂಜೆ ೫.೩೦ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನಿಡಲಿದ್ದಾರೆ. ಹೊಸದಿಲ್ಲಿ ರಾಷ್ಟ್ರೀಯ ನಾಟಕ ಶಾಲೆ ಅಧ್ಯಕ್ಷ ಪರೇಶ್ ರಾವಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್, ನಟ ರಮೇಶ್ ಅರವಿಂದ್, ಮಹಾಪೌರ ಶಿವಕುಮಾರ್ ಭಾಗವಹಿಸಲಿದ್ದಾರೆ.

ಬಹುರೂಪಿ ಜನಪದೋತ್ಸವ

ಡಿ. ೮ರಿಂದ ೧೫ರವರೆಗೆ ವನರಂಗದಲ್ಲಿ ಬಹುರೂಪಿ ಜನಪದೋತ್ಸವ ನಡೆಯಲಿದೆ. ಡಿ. ೮ರಂದು ನಂಜನಗೂಡಿನ ಮಹದೇವ್ ಮತ್ತು ತಂಡದಿಂದ ಕಂಸಾಳೆ, ಕೆರೆ ಮನೆ ಶಿವಾನಂದ ಹೆಗಡೆ, ಇಡಗುಂಜಿ ಮೇಳದಿಂದ ಯಕ್ಷಗಾನ ಪ್ರದರ್ಶನ ಇರಲಿದೆ.

 

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ