ಹನೂರು: ಬುಧವಾರ ಸುರಿದ ಭಾರಿ ಮಳೆಗೆ ಪಿಜಿಪಾಳ್ಯ ಗ್ರಾಪಂ ವ್ಯಾಪ್ತಿಯ ಸಣ್ಣೇಗೌಡನದೊಡ್ಡಿ ಗ್ರಾಮದ ಮಾದಪ್ಪ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದು ಮನೆಯಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಮನೆಯ ಗೋಡೆ ಕುಸಿದು ಅಪಾರ ಪ್ರಮಾಣದ ಆಹಾರ ಪದಾರ್ಥಗಳು ನೀರು ಪಾಲಾಗಿವೆ.ಇದಲ್ಲದೆ ಇರುವ ಗೋಡೆಗಳು ಬೀಳುವ ಹಂತದಲ್ಲಿರುವುದರಿಂದ ಪಂಚಾಯಿತಿ ವತಿಯಿಂದ ನೂತನ ಮನೆ ನಿರ್ಮಾಣ ಮಾಡಿಕೊಡುವಂತೆ ಸಂತ್ರಸ್ತ ಮಾದಪ್ಪ ಆಗ್ರಹಿಸಿದ್ದಾರೆ.
ಶೀಘ್ರವೇ ಪರಿಹಾರ ಕಲ್ಪಿಸಿ : ಕಳೆದ ಒಂದು ವಾರದಿಂದ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸತತ ಮಳೆ ಬೀಳುತ್ತಿರುವ ಪರಿಣಾಮ ಏಳಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದಿದೆ .ಆದರೆ ಸರ್ಕಾರ ಇದುವರೆಗೆ ಪರಿಹಾರ ಕಲ್ಪಿಸಿಲ್ಲ ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಸಂತ್ರಸ್ಥರು ಒತ್ತಾಯಿಸಿದ್ದಾರೆ.