Mysore
22
broken clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ತಾತಯ್ಯ ಪ್ರತಿಮೆ ಮುಂಭಾಗ ಪ್ರತಿಭಟಿಸಿದ ಎನ್‌ಟಿಎಂಎಸ್ ಶಾಲೆ ಉಳಿಸಿ ಹೋರಾಟ

ಮೈಸೂರು: ರಾಜಮನೆತನದ ಕೆಂಪನಂಜಮ್ಮಾಣಿ ಅವರು ಹೆಣ್ಣುಮಕ್ಕಳಿಗಾಗಿ ನಿರ್ಮಾಣ ಮಾಡಿದ್ದ ಎನ್‌ಟಿಎಂಎಸ್ ಶಾಲೆಯನ್ನು ಕೆಡವಿ ಮಕ್ಕಳಿಗೆ ದ್ರೋಹ ಎಸಗಿರುವ ರಾಮಕೃಷ್ಣ ಆಶ್ರಮದವರು ಕೂಡಲೆ ಶಾಲೆಯನ್ನು ಮರು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಎನ್‌ಟಿಎಂಎಸ್ ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ಮುಂದುವರೆದಿದೆ.

ಮಂಗಳವಾರ ನಗರದ ನಗರ ಸಾರಿಗೆ ಬಸ್ ನಿಲ್ದಾಣ ಮುಂಬಾಗವಿರುವ ತಾತಯ್ಯ ಅವರ ಪ್ರತಿಮೆ ಮುಂಭಾಗ ಜಮಾವಣೆಗೊಂಡ ಸಮಿತಿ ಸದಸ್ಯರು ಹಾಗೂ ಪ್ರಮುಖರು, ರಾಮಕೃಷ್ಣ ಆಶ್ರಮದವರು ತಾವು ಹೇಳಿದಂತೆ ನಡೆದುಕೊಳ್ಳಬೇಕು ಎಂದು ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜಮನೆತನದವರು ಬಡಮಕ್ಕಳಿಗಾಗಿ ಸ್ಥಾಪಿಸಿದ್ದ ಶಾಲೆಯನ್ನು ರಾಮಕೃಷ್ಣ ಆಶ್ರಮದವರು ಕೆಡವಿದ್ದಾರೆ. ಅದೇ ಸ್ಥಳದಲ್ಲಿ ಹೊಸದಾಗಿ ಶಾಲೆ ನಿರ್ಮಿಸುತ್ತೇವೆ ಎಂದು ಅನೇಕ ಪ್ರಮುಖರ ಮುಂದೆ ಭರವಸೆ ನೀಡಿದ್ದರು. ಆದರೂ ಅವರು ತಮ್ಮ ಒಪ್ಪಂದವನ್ನು ಮರೆತಿದ್ದಾರೆ ಎಂದರು.

ದೇಶದ ಒಳಿತಿಗಾಗಿ ತಮ್ಮ ಜೀವನ ಸವೆಸಿದ ತಾತಯ್ಯ ಅವರು, ತಮ್ಮ ಜೀವನದುದ್ದಕ್ಕೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸಿದರು. ವಸತಿ ನಿಲಯಗಳನ್ನು ಸ್ಥಾಪಿಸಿ ಊಟ, ವಸತಿಯನ್ನು ನೀಡಿದರು. ಅವರ ತ್ಯಾಗ ಮನೋಭಾವ, ತತ್ವ, ಆದರ್ಶಗಳು ರಾಮಕೃಷ್ಣ ಆಶ್ರಮದವರ ಮನಸ್ಸಿನ ಮೇಲೆ ಪರಿಣಾಮ ಬೀರಲಿ ಎಂಬ ಉದ್ದೇಶದಿಂದ ನಾವು ಅವರ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ರಾಮಕೃಷ್ಣ ಆಶ್ರಮದವರು ತಮ್ಮ ಮಾತನ್ನು ಉಳಿಸಿಕೊಳ್ಳಲು ಇಂದಿಗೂ ಅವಕಾಶವಿದೆ. ಅದೇ ಜಾಗದಲ್ಲಿ ಶಾಲೆ ಹಾಗೂ ಉಳಿದ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಿಸಿಕೊಂಡು ಶಾಲೆಯನ್ನು ಉಳಿಸಬೇಕು. ಇದರಿಂದ ವಿವೇಕಾನಂದಸ್ವಾಮಿ ಅವರ ಆತ್ಮಕ್ಕೂ ಶಾಂತಿ ದೊರಕುತ್ತದೆ ಎಂದು ಹೇಳಿದರು.

ಸಮಿತಿಯ ಸಂಚಾಲಕ ಎಂ.ಮೋಹನ್ ಕುಮಾರ್‌ಗೌಡ, ಮಾಜಿ ಮಹಾಪೌರ ಪುರುಷೋತ್ತಮ್, ರತ್ನಮ್ಮ, ಗೋವಿಂದರಾಜು, ರವೀಗೌಡ, ಕೃಷ್ಣ, ರವಿ, ಬಿ.ಮಹದೇವ್, ಬೆಟ್ಟೇಗೌಡ, ಜಿ.ಪ್ರಕಾಶ್, ಬಾಲಕಲೃಷ್ಣ ಸಂಗಾಪುರ, ಸ್ವಾಮಿ, ಸಿದ್ದಪ್ಪ, ಮುಂತಾದವರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!