Mysore
18
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಾದೇಶ್ವರ ಬೆಟ್ಟದಲ್ಲಿ ದೀಪೋತ್ಸವಕ್ಕೆ ಸಿದ್ಧತೆ

ಹನೂರು : ಕಡೇ ಕಾರ್ತಿಕ ಸೋಮವಾರವಾದ (ಇಂದು) ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ಜರುಗುವ ಶ್ರೀ ಮಹದೇಶ್ವರರ ಮಹಾಜ್ಯೋತಿ ದರ್ಶನಕ್ಕೆ (ದೀಪೋತ್ಸವ) ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳು ಜರುಗಿದೆ.

ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ ಸ್ವಾಮಿಗೆ ವಿಶೇಷ ಪೂಜೆ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ಮುಂಜಾನೆ ಯಿಂದಲೇ ಜರುಗಿದೆ. ಇದರ ಜೊತೆಗೆ ಸಂಜೆ ಮಹದೇಶ್ವರರ ಮಹಾಜ್ಯೋತಿ ದರ್ಶನವು (ದೀಪೋತ್ಸವ) ಸಾವಿರಾರು ಭಕ್ತರ ಸಮುಖದಲ್ಲಿ ನೆರವೇರಲಿದೆ. ಈ ದಿಸೆಯಲ್ಲಿ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಪ್ರಾಧಿಕಾರದ ವತಿಯಿಂದ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಗೃಹ ಹಾಗೂ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಸೂಕ್ತ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ದೇಗುಲವನ್ನು ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ದೀಪೋತ್ಸವಕ್ಕೆ ಸಿದ್ಧತೆ: ಸೋಮವಾರ ಸಂಜೆ ನಡೆಯುವ ದೀಪೋತ್ಸವದ ಹಿನ್ನಲೆ ದೀಪದಗಿರಿ ಒಡ್ಡುವಿನ ಬಳಿ ಅಳವಡಿಸಲಾಗಿರುವ ಬೃಹತ್ ಅಣತೆಗೆ ಬಿಳಿ ಬಣ್ಣವನ್ನು ಬಳಿಯಲಾಗಿದೆಯಲ್ಲದೇ ಚಪ್ಪರವನ್ನು ನಿರ್ಮಿಸಿ ತಳೀರು ತೋರಣಗಳಿಂದ ಸಿಂಗಾರ ಮಾಡಲಾಗಿದೆ. ದೀಪೋತ್ಸವದ ವೇಳೆ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುವುದರಿಂದ ಈ ಮಾರ್ಗದ ರಸ್ತೆಯನ್ನು ದುರಸ್ತಿಪಡಿಸಲಾಗಿದ್ದು, ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳು ನಡೆದಿದೆ.

ಮಹಾಜ್ಯೋತಿಯ ದರ್ಶನ: ಇಂದು ಸಂಜೆ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿರುವ ಬಸವ ವಾಹನದಲ್ಲಿ ಕುಳ್ಳರಿಸಿ ಸತ್ತಿಗೆ, ಸೂರಿಪಾನಿ, ಜಾಗಟೆ ಹಾಗೂ ವಾದ್ಯ ಮೇಳದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಉತ್ಸವವನ್ನು ನೆರವೇರಿಸಲಾಗುತ್ತದೆ. ನೈವೇದ್ಯ ಹಾಗೂ ಮಂಗಳಾರತಿ ಬೆಳಗಿದ ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೀಪದಗಿರಿ ಒಡ್ಡುಗೆ ಕೊಂಡೋಯ್ಯಲಾಗುತ್ತದೆ. ಈ ವೇಳೆ ಸ್ವಾಮಿಗೆ ಬಿಲ್ವಾರ್ಚನೆ, ದೀವಾಟಿಕೆ ಸೇವೆ ಹಾಗೂ ಧೂಪ ದೀಪಧಾರತಿ ಸೇವೆ ನೆರವೇರಿಸುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಿ ಮಹಾಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಬಳಿಕ ದೇಗುಲಕ್ಕೆ ತೆರಳಿ ಸ್ವಾಮಿಗೆ ನೈವೇದ್ಯ ಅರ್ಪಿಸಿ ಕಾರ್ತಿಕ ಮಾಸದ ಪೂಜೆಯನ್ನು ನೆರವೇರಿಸಿದ ಬಳಿಕ ಭಕ್ತರಿಗೆ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಗುತ್ತದೆ.

ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಭಕ್ತರು: ಕಡೇ ಕಾರ್ತಿಕ ಸೋಮವಾರದಂದು ಮ.ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜೆ, ಮಹಾಜ್ಯೋತಿ ದರ್ಶನ ಹಾಗೂ ತೆಪ್ಪೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಈಗಾಗಲೇ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ತೆರಳಿ ಮ.ಬೆಟ್ಟದಲ್ಲಿ ಬೀಡು ಬಿಟ್ಟಿದ್ದಾರೆ.

1.5 ಲಕ್ಷ ಲಾಡು ಸಿದ್ದ: ಮ.ಬೆಟ್ಟದಲ್ಲಿ ಪ್ರಸಾದದ ರೂಪದಲ್ಲಿ ಲಾಡು ವಿತರಣೆ ಮಾಡಲಾಗುತ್ತದೆ. ಪ್ರತಿ ಲಾಡಿಗೆ 25ರೂ ದರ ನಿಗಧಿ ಮಾಡಲಾಗಿದೆ. ಇಲ್ಲಿಗೆ ಆಗಮಿಸುವ ಬಹುತೆಕ ಭಕ್ತರು ಲಾಡನ್ನು ಪಡೆಯದೇ ಹಿಂತಿರುಗುವುದಿಲ್ಲ. ಆಗಾಗಿ ಲಾಡಿಗೆ ಹೆಚ್ಚಿನ ಬೇಡಿಕೆ ಇದೆ. ಈ ದಿಸೆಯಲ್ಲಿ ಸೋಮವಾರ ಸಾವಿರಾರು ಭಕ್ತರು ಆಗಮಿಸುವುದರಿಂದ ಈಗಾಗಲೇ 1.5 ಲಕ್ಷ ಲಾಡನ್ನು ತಯಾರಿಸಲಾಗಿದೆ. ಅಲ್ಲದೇ ಬೇಡಿಕೆಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ಇನ್ನು ಹೆಚ್ಚಿನ ಲಾಡನ್ನು ತಯಾರಿಸಲು ಪ್ರಾಧಿಕಾರ ಅಗತ್ಯ ಕ್ರಮಕೈಗೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!