ಮೈಸೂರು: ಮೈಸೂರಿನ ಪ್ರತಿಷ್ಠಿತ ಜೆಎಸ್ಎಸ್ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪ್ರತಿಮೆ ವಿಚಾರವನ್ನು ಕಾಂಗ್ರೆಸ್ ಮುನ್ನಲೆಗೆ ತಂದಿದ್ದು, ಮೈಸೂರು-ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶ್ರೀಗಳ ಪ್ರತಿಮೆ ವಿರುದ್ಧ ನೀಡಿರುವ ಪ್ರಕರಣ ವಾಪಾಸ್ ಪಡೆದು ಕ್ಷಮೆ ಕೇಳುವಂತೆ ಕಾಂಗ್ರೆಸ್ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಗನ್ಹೌಸ್ ಬಳಿ ರಾತ್ರೋರಾತ್ರಿ ದೇಶಿಕೇಂದ್ರ ಸ್ವಾಮಿಗಳ ಪ್ರತಿಮೆ ಸ್ಥಾಪಿಸಲಾಗಿತ್ತು. ಇದಕ್ಕೆ ರಾಜಮನೆತನದವರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಇನ್ನು ಈ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ಕಾಂಗ್ರೆಸ್ ಮಾಜಿ ಮೇಯರ್ ಬಿ.ಎಲ್ ಭೈರಪ್ಪ ಈ ಬಗ್ಗೆ ಮಾತನಾಡಿದ್ದಾರೆ.
ತ್ರಿವಿಧ ದಾಸೋಹಿ ಸುತ್ತೂರು ಸ್ವಾಮಿಗಳ ಪ್ರತಿಮೆ ಅನಾವರಣಕ್ಕೆ ಮೈಸೂರು ರಾಜಮನೆತನ ವಿರೋಧ ವ್ಯಕ್ತಿಪಡಿಸಿದೆ. ಆದರೇ ಚುನಾವಣೆಗೆ ಸುತ್ತೂರು ಶ್ರೀಗಳ ಆಶೀರ್ವಾದ ಬೇಕು ಎಂದು ಯದುವೀರ್ ಅವರು ಮಠಕ್ಕೆ ಹೋಗುವುದಕ್ಕೆ ಯಾವ ನೈತಿಕತೆಯಿದೆ. ಎಲ್ಲಾ ಸಮುದಾಯದ ಏಳಿಗೆಗಾಗಿ ದುಡಿದು, ಬಿಕ್ಷೆ ಬೇಡಿ ಅನ್ನ ದಾಸೋಹ ನಡೆಸುತ್ತಿದ್ದ ಶ್ರೀಗಳ ಪ್ರತಿಮೆ ಅನಾವರಣಕ್ಕೆ ನೀವು ಅವಕಾಶ ಯಾಕೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ಈ ಸಂಬಂಧ ಸುಪ್ರೀಂ ನಲ್ಲಿ ಪ್ರಕರಣ ನಡೆಯುತ್ತಿದೆ. ಇದನ್ನು ಯದುವೀರ್ ಅವರು ವಾಪಾಸ್ ಪಡೆದು ಪ್ರತಿಮೆ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕು. ಇದರಿಂದ ನಿಮ್ಮ ಘನತೆ ಇನ್ನೂ ಹೆಚ್ಚಾಗಲಿದೆ. ರಾಜ್ಯ ಸರ್ಕಾರ, ಮಹಾನಗರ ಪಾಲಿಕೆಯಿಂದಲೂ ಅನುಮತಿ ಪಡೆದಿದ್ದರು ಅದಕ್ಕೆ ನೀವು ತಡೆಯೊಡ್ಡಿರುವುದು ಸರಿಯಲ್ಲ. ಈ ಬಗ್ಗೆ ಭಹಿರಂಗ ಕ್ಷಮೆ ಕೇಳಬೇಕು ಎಂದು ಮಾಜಿ ಮೇಯರ್ ಭೈರಪ್ಪ, ಯದುವೀರ್ ಒಡೆಯರ್ ಅವರನ್ನು ಒತ್ತಾಯಿಸಿದ್ದಾರೆ.





