ದಸರಾ ಸಡಗರ ಹೆಚ್ಚಿಸಿದ ಸಿಹಿ ಸುದ್ದಿ
ಮೈಸೂರು: ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಆಚರಣೆಗಳು ನಡೆಯುತ್ತಿರುವಾಗಲೇ ಒಡೆಯರ್ ರಾಜವಂಶಕ್ಕೆ ಸಿಹಿ ಸುದ್ದಿಯೊಂದು ದೊರಕಿದೆ. ಯದುವೀರ್ ಮತ್ತು ತ್ರಿಷಿಕಾ ಕುಮಾರಿ ದಂಪತಿ ತಮ್ಮ ಎರಡನೆ ಗಂಡು ಮಗುವನ್ನು ಸ್ವಾಗತಿಸಿದ್ದಾರೆ.
ಆಯುಧ ಪೂಜೆ ದಿನವೇ ಗಂಡು ಮಗು ಜನಿಸಿದ್ದು ರಾಜವಂಶಸ್ತರಲ್ಲಿ ಸಂತೋಷ ಮನೆ ಮಾಡಿದೆ. ಯದುವೀರ್ ಖಾಸಗಿ ದರ್ಬಾರ್ ನಡೆಸಲು ಕಂಕಣಧಾರಿಯಾಗಿ ಮಹಾನವಮಿ ಪೂಜೆಯಲ್ಲಿ ಪಾಲ್ಗೊಂಡಿದ್ದಾಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ತ್ರಿಷಿಕಾ ಅವರಿಗೆ ಗಂಡು ಮಗು ಹುಟ್ಟಿದೆ ಎಂದು ಅರಮನೆ ಮೂಲಗಳು ತಿಳಿಸಿವೆ. ಇದರಿಂದ ದಸರಾಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
2016ರಲ್ಲಿ ಮದುವೆಯಾಗಿದ್ದ ದಂಪತಿಗೆ 2017ರ ಡಿಸೆಂಬರ್ನಲ್ಲಿ ಆದ್ಯವೀರ್ ನರಸಿಂಹರಾಜ ಒಡೆಯರ್ ಜನಿಸಿದ್ದನು.





