ಮೈಸೂರು: ಮೈಸೂರು ನಗರವು ಹಿಂದೆ ಹೆಚ್ಚು ಬಾರಿ ಸ್ವಚ್ಛನಗರಿ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ಈಗ ಕೆಲವು ವರ್ಷಗಳಿಂದ ಆ ಅವಕಾಶ ಕೈತಪ್ಪಿ ಹೋಗಿದೆ. ಮತ್ತೇ ಮೈಸೂರಿಗೆ ಪ್ರಶಸ್ತಿ ಬರಲು ನಗರದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಸಿಎಫ್ಟಿಆರ್ಐನಲ್ಲಿ ‘ಇಕೋ ಫ್ಯಾಕ್ಟರಿ ಫೌಂಡೇಶನ್’ ಸಹಯೋಗದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛನಗರಿ ಪ್ರಶಸ್ತಿ ಬರಲು ಹಲವಾರು ಮಾನದಂಡಗಳಿವೆ. ಮೈಸೂರಿನಲ್ಲಿ ಸ್ವಚ್ಛತೆಗೆ ಹಿಂದಿನಿಂದಲೂ ಆದ್ಯತೆ ನೀಡಲಾಗಿದೆ. ಆದರೆ, ಈಗ ಕಾಮಗಾರಿಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಅವುಗಳ ತ್ಯಾಜ್ಯ ಸಾಗಣೆ ದುಸ್ತರವಾಗಿದೆ ಎಂದರು.
ನಗರದ ಸುತ್ತಮುತ್ತ ಅನೇಕ ಬಡಾವಣೆಗಳು ಬೆಳೆದಿವೆ. ಅವುಗಳ ಪ್ರಮಾಣಕ್ಕೆ ಅನುಗುಣವಾಗಿ ಕಸ ಸಂಗ್ರಹಣೆ, ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಇವುಗಳನ್ನು ಬಲವರ್ಧನೆಗೊಳಿಸಬೇಕಾದ ಅವಶ್ಯಕತೆ ಇದೆ. ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಚಟುವಟಿಕೆಗಳಾಗಬೇಕು ಎಂದರು.
ಸಿಎಫ್ಟಿಆರ್ಐ ನಿರ್ದೇಶಕರಾದ ಶ್ರೀದೇವಿ ಅನ್ನಪೂರ್ಣಸಿಂಗ್, ಮಾಜಿ ಶಾಸಕ ಎಲ್.ನಾಗೇಂದ್ರ, ಸಿಎಫ್ಟಿಆರ್ನ ವಿಜ್ಞಾನಿಗಳು ಉಪಸ್ಥಿತರಿದ್ದರು.





