ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ ಅರ್ಚಕ ದೇವಪ್ರಸಾದ್ ದೀಕ್ಷಿತ್ ಅವರ ಮೇಲೆ ಸಿದ್ಧಾಂತ್ ಎಂಬ ಯುವಕ ಹಲ್ಲೆ ಮಾಡಿ ಹುಚ್ಚಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಅರ್ಚಕ ದೇವಪ್ರಸಾದ್ ದೀಕ್ಷಿತ್ ಅವರ ಮೇಲೆ ಹಲ್ಲೆ ಮಾಡಿರುವ ಸಿದ್ಧಾಂತ್ ಎಂಬಾತ ಸಿದ್ದಾರ್ಥ ಬಡಾವಣೆಯ ಶಾಂತಲಾ ಶಾಲೆ ಮುಖ್ಯಸ್ಥ ಪ್ರೊ. ಸಂತೋಷ್ ಮಗ ಎಂದು ಗುರುತಿಸಲಾಗಿದೆ. ಅಲ್ಲದೇ ದೇವಪ್ರಸಾದ್ ದೀಕ್ಷಿತ್ ಅವರ ಕುಟುಂಬ ಸಿದ್ಧಾರ್ಥನಗರ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಇದೇ ಬಡಾವಣೆಯಲ್ಲಿ ಪ್ರೊ.ಸಂತೋಷ್ ಎಂಬುವವರ ಕುಟುಂಬವೂ ಇದೆ.
ಈ ಘಟನೆಗೆ ಕಾರಣವಾಗಿರುವ ಸಿದ್ಧಾಂತ್ ಸೋಮವಾರ(ಫೆಬ್ರವರಿ.10) ರಂದು ದೇವಪ್ರಸಾದ್ ಅವರ ಮನೆಗೆ ರಾತ್ರಿ ೯ ಗಂಟೆಗೆ ನುಗ್ಗಿ ಹಣ ನೀಡುವಂತೆ ಪೀಡಿಸಿದ್ದಾನೆ. ಆ ವೇಳೆ ಹಣ ನೀಡಲು ನಿರಾಕರಿಸಿದ ದೇವಪ್ರಸಾದ್ ಅವರ ಮುಖಕ್ಕೆ ಗುದ್ದಿ, ಗಾಯಗೊಳಿಸಿದ್ದಾನೆ. ಅದೇ ಸಮಯಕ್ಕೆ ಮನೆಗೆ ಬಂದ ಅರ್ಚಕರ ಮಗ ಸುದೇವ್ ಎಂಬುವವರು ನೆರೆಹೊರೆಯವರ ಸಹಾಯ ಪಡೆದು ಸಿದ್ಧಾಂತ್ ಅನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನೂ ಮಗನ ಹುಚ್ಚಾಟದ ವಿಚಾರವನ್ನು ತಿಳಿದ ಪ್ರೊ.ಸಂತೋಷ್ ಮತ್ತು ಅವರ ಪತ್ನಿ ಚಾಮುಂಡಿ ಬೆಟ್ಟದ ಅರ್ಚಕ ದೇವಪ್ರಸಾದ್ ದೀಕ್ಷಿತ್ರ ಬಳಿ ಗೋಳಾಟ ಮಾಡಿದ್ದರಿಂದ ಅವರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.





