ನಂಜನಗೂಡು: ನಾಲ್ವರು ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಅಭಿಷೇಕ್ ಹಾಗೂ ರವಿ ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ನಡೆದಿದೆ.
ಹಲ್ಲೆ ನಡೆಸಿರುವ ನಂಜನಗೂಡಿನ ಸುಭಾಷ್, ಆಕಾಶ, ಸತ್ಯ ಎಂಬುವವರ ಮೇಲೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಅಭಿಷೇಕ್ ನಂಜನಗೂಡಿನ ಶ್ರೀರಾಂಪುರದ ಯುವತಿಯನ್ನ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಪತ್ನಿಯ ದೊಡ್ಡಮ್ಮನ ಮಗ ಶಿವಕುಮಾರ್ಗೆ ಸುಭಾಷ್, ಆಕಾಶ್, ಸತ್ಯ ಎಂಬುವವರು ಕಪಿ ಕಪಿ ಎಂದು ಛೇಡಿಸುತ್ತಿದ್ದರು. ಈ ಬಗ್ಗೆ ಶಿವಕುಮಾರ್ ತಾಯಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಶಶಿಕುಮಾರ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಅಭಿಷೇಕ್ ಪತ್ನಿ ಮನೆಗೆ ಬಂದಾಗ ಶಶಿಕುಮಾರ್ ಅವರ ಅಣ್ಣನನ್ನು ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆಗಾಗಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು.
ಇದೇ ವೇಳೆ ಹೊಂಚು ಹಾಕಿದ ಸುಭಾಷ್ ತಂಡ ಪ್ಯಾಸೆಂಜರ್ ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದು ಲಾಂಗ್ಗಳನ್ನ ಹಿಡಿದು ಭೀತಿ ಸೃಷ್ಟಿಸಿ ಅಭಿಷೇಕ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬಿಡಿಸಲು ಬಂದ ಶಶಿಕುಮಾರ್ ಅಣ್ಣ ರವಿ ಮೇಲೂ ಅಟ್ಯಾಕ್ ಮಾಡಿದ್ದಾರೆ. ಚಾಕು, ಕಬ್ಬಿಣದ ರಾಡ್, ರಿಪೀಸ್ ಪಟ್ಟಿಗಳಿಂದ ಹಲ್ಲೆ ನಡೆಸಿ ರಣರಂಗ ಸೃಷ್ಟಿಮಾಡಿದ್ದಾರೆ. ಇವರಿಂದ ಅಭಿಷೇಕ್ ತಪ್ಪಿಸಿಕೊಂಡು ಓಡಿದ್ರೂ ಚೇಸ್ ಮಾಡಿದ ಆರೋಪಿಗಳು ಹಟ್ಟಿಮಾರಮ್ಮನ ದೇವಸ್ಥಾನದ ಬಳಿ ಹಿಡಿದು ಮತ್ತೆ ಹಲ್ಲೆ ನಡೆಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಅಭಿಷೇಕ್ ಹಾಗೂ ರವಿ ಎಂಬುವವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.





