ಮೈಸೂರು : ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ 71 ವರ್ಷದ ಪದ್ಮಾವತಿ ಆನೆ ಗುರುವಾರ ಮೃತಪಟ್ಟಿದೆ.
ಸುಮಾರು 71 ವರ್ಷ 2 ತಿಂಗಳು ವಯಸ್ಸಿನ ಪದ್ಮಾವತಿ ಎಂಬ ಹೆಣ್ಣಾನೆಯು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಅವಿಭಾಜ್ಯ ಅಂಗವಾಗಿತ್ತು. 1973 ವರ್ಷದಲ್ಲಿ ಖೆಡ್ಡಾ ಕಾರ್ಯಾಚರಣೆಯಲ್ಲಿ(1953-54)ನೇ ವರ್ಷದಲ್ಲಿ ಅಂದಾಜು ಜನನ) ರಕ್ಷಿಸಲ್ಪಟ್ಟ ಪದ್ಮಾವತಿ ಆನೆಯು ಮೃಗಾಲಯದ ಇತಿಹಾಸದಲ್ಲಿ ಅತ್ಯಂತ ಹಿರಿಯ ಆನೆಯಾಗಿತ್ತು. ಸುಮಾರು 53 ವರ್ಷಗಳ ಕಾಲ ಮೈಸೂರು ಮೃಗಾಲಯದ ಆರೈಕೆಯಲ್ಲಿತ್ತು.
ಈ ಆನೆಯು ಗಜಲಕ್ಷ್ಮೀ(1979), ಕೋಮಲ(1996), ಅಭಿಮನ್ಯು(2004ರಲ್ಲಿ) ಮರಿಗಳಿಗೆ ಜನ್ಮ ನೀಡಿತ್ತು. ವಯಸ್ಸಾದ ಕಾರಣ ನಾಲ್ಕು ವರ್ಷಗಳ ಹಿಂದೆ ಅದನ್ನು ಮೈಸೂರು ಮೃಗಾಲಯದ ಶ್ರೀ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಬುಧವಾರದವರೆಗೂ ಆನೆಯ ಆರೋಗ್ಯವು ಸ್ಥಿರವಾಗಿತ್ತು. ಆದರೆ, ಗುರುವಾರ ಬೆಳಿಗ್ಗೆಯಿಂದ ಆನೆ ಮೇಲೇಳಲು ಸಾಧ್ಯವಾಗದೆ ಮಲಗಿದ ಸ್ಥಿತಿಯಲ್ಲೇ ಇತ್ತು. ಮೈಸೂರು ಮೃಗಾಲಯದ ಪಶುವೈದ್ಯ ತಂಡವು ತಕ್ಷಣವೇ ತೀವ್ರ ವೈದ್ಯಕೀಯ ಪರೀಕ್ಷೆಗಳು ಮತ್ತು ಸಹಾಯಕ ಚಿಕಿತ್ಸೆ ಸೇರಿದಂತೆ ವೈದ್ಯಕೀಯ ಆರೈಕೆಯನ್ನು ಪ್ರಾರಂಭಿಸಿತ್ತು.
ಎಲ್ಲಾ ಪ್ರಯತ್ನಗಳ ನಡುವೆಯೂ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಂಜೆ 5.10 ರಲ್ಲಿ ಕೂರ್ಗಳ್ಳಿ ಕೇಂದ್ರದಲ್ಲಿ ಸಾವನ್ನಪ್ಪಿದೆ. ಸಾವಿನ ನಿಖರವಾದ ಕಾರಣವನ್ನು ತಿಳಿಯಲು ಸದ್ಯದಲ್ಲೇ ಮರಣೋತ್ತರ ಪರೀಕ್ಷೆ ನಡೆಲಾಗುವುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





