ಎಚ್.ಡಿ.ಕೋಟೆ : ಪತಿ ಮೃತಪಟ್ಟ ಮಾರನೇ ದಿನವೇ ಶಿಕ್ಷಕಿಯೊಬ್ಬರು ಶಾಲೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಂಪಾಪುರ ಸಮೀಪದ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರ ಪತಿ ಕಿರಣ್ ಕುಮಾರ್(47), ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದ್ರೆ ಮಾರ್ಚ್ 28 ರಂದು ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ಇರುವ ಕಾರಣ ವಿದ್ಯಾರ್ಥಿಗಳ ಭವಿಷ್ಯಕ್ಕೊಸ್ಕರ ದುಃಖದ ಮಡುವಿನಲ್ಲಿದ್ದರೂ ಜ್ಯೋತಿ ಮರುದಿನವೇ ಶಾಲೆಗೆ ಹಾಜರಾಗಿ ಗಣಿತ ವಿಷಯದ ಬಗ್ಗೆ ಮಕ್ಕಳಿಗೆ ಪೂರ್ವ ಸಿದ್ಧತೆ ಮಾಡಿಸಿದ್ದಾರೆ.
ಶಿಕ್ಷಣಾಧಿಕಾರಿ ಅವರು ನೀವು ರಜೆ ಪಡೆಯಿರಿ ನಾವು ಬೇರೆ ಶಿಕ್ಷಕರನ್ನ ನಿಯೋಜನೆ ಮಾಡ್ತೀವಿ ಅಂದ್ರು ಸಹ ಗಣಿತ ವಿಷಯ ಸಂಪೂರ್ಣವಾಗಿ ನಾನೇ ಬೋಧಿಸಿದ್ದೇನೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗಣಿತ ಸ್ವಲ್ಪ ಕಠಿಣವಾಗಿರುತ್ತದೆ. ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕು ಎಂಬ ಉದ್ದೇಶದಿಂದ ಶಾಲೆಗೆ ಬಂದಿದ್ದೇನೆ. ನಾಳೆಯೂ ಬಂದು ಮಕ್ಕಳೊಂದಿಗೆ ಇರುತ್ತೇನೆ ಎಂದು ಹೇಳಿ ಶಿಕ್ಷಕಿ ಜ್ಯೋತಿ ಅವರು ಜಿ.ಬಿ ಸರಗೂರು ಗ್ರಾಮದ ಶಾಲೆಗೆ ಹಾಜರಾಗಿ 222 ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಪೂರ್ವ ಸಿದ್ಧತೆ ಕುರಿತು ಮಾರ್ಗದರ್ಶನ ನೀಡಿದ್ದಾರೆ.
ಪೋಷಕರು, ಸಾರ್ವಜನಿಕರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಜ್ಯೋತಿ ಅವರ ಕಾರ್ಯಕ್ಕೆ ಗೌರವ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





