Mysore
34
clear sky

Social Media

ಶನಿವಾರ, 15 ಮಾರ್ಚ್ 2025
Light
Dark

ತಿ.ನರಸೀಪುರ ಕುಂಭಮೇಳ : ತ್ರಿವೇಣಿ ಸಂಗಮದ ಕಾವೇರಿಗೆ ಆರತಿ

ಮೈಸೂರು : ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಹರಿದು ಬಂದಿದ್ದ ಭಕ್ತ ಸಾಗರವು ‘ಕಾವೇರಿ ಆರತಿ’ಯ ಬೆಳಗನ್ನು ಕಣ್ತುಂಬಿಕೊಂಡಿತು.

ಕುಂಭಮೇಳದ ಎರಡನೇ ದಿನವಾದ ಮಂಗಳವಾರ, ಅಗಸ್ತ್ಯೇಶ್ವರ ಸ್ವಾಮಿ ದೇಗುಲದ ಸ್ನಾನಘಟ್ಟದಲ್ಲಿ ಗಂಗೆಯನ್ನು ನಮಿಸಿದ ಅರ್ಚಕರು ಬೆಳಗಿದ ದೀಪಗಳು ಕಾವೇರಿ, ಕಪಿಲೆ, ಸ್ಪಟಿಕ ನದಿಗಳ ಸಂಗಮದಲ್ಲಿ ಹೊಳೆದವು.

ಜೀವನದಿಗಳಾದ ‘ಕಾವೇರಿ’, ‘ಕಪಿಲೆ’ಗೆ ಜಯಕಾರ ಹಾಕಿದರು. ಸ್ವರ್ಗಸದೃಶ ವಾತಾವರಣ ನೋಡಿದವರ ಎದೆಯಲ್ಲಿ ಭಕ್ತಿರಸವು ಹರಿಯಿತು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, , ಸೋಮೇಶ್ವರನಾಥ ಸ್ವಾಮೀಜಿ, ತಿರುಚ್ಚಿ ಸಂಸ್ಥಾನ ಮಠದ ಜಯೇಂದ್ರಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಮಂಗಳವಾದ್ಯಗಳಲ್ಲಿ ಕರೆತರಲಾಯಿತು.

ನಂತರ ರಾತ್ರಿ 8 ಗಂಟೆಗೆ ಕಾವೇರಿ ಆರತಿ ಓಂಕಾರದ ಮೂಲಕದ ಚಾಲನೆ ದೊರಕಿತು. ದೂಪಾರತಿಯನ್ನು ಮಾಡಿದ ಅರ್ಚಕರ ತಂಡವು, ಗಂಟೆಗಳ ನಾದವನ್ನು ಹೊಮ್ಮಿಸಿತು. ಚಾಮರಗಳನ್ನು ಬೀಸಿದರು.

ಶಿವಸ್ತುತಿಯು ಮೊಳಗುತ್ತಿದ್ದಂತೆ ದೀಪಗಳನ್ನು ಒಂಭತ್ತು ಅರ್ಚಕರು ಹೊತ್ತಿಸಿದರು. ಕಾವೇರಿ ಮಾತೆಗೆ ಮೂರು ಸುತ್ತು ಬೆಳಗಿ, ಆಗಸಕ್ಕೆ ತೋರಿದರು.  ನೋಡುತ್ತಿದ್ದ ಭಕ್ತರು, ಕೈ ಮುಗಿದರು. ‘ಕಾಲಭೈರವ’, ‘ರುದ್ರ’ ಶ್ಲೋಕಗಳ ಗೀತೆಗಳ ಹಿಮ್ಮೇಳವು ಭಾವ ತೀವ್ರತೆಯನ್ನು ಹೆಚ್ಚಿಸಿತು.

ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಪಾಲ್ಗೊಂಡಿದ್ದರು.

 

Tags: