ಮೈಸೂರು: ಭಾರತೀಯ ಸಂಸ್ಕೃತಿಯ ಮತ್ತು ಪರಂಪರೆಯ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ ಎಂದು ಶಾಸಕ ಟಿಎಸ್ ಶ್ರೀವತ್ಸ ಹೇಳಿದರು.
ನಗರದ ಕುವೆಂಪು ನಗರದಲ್ಲಿರುವ ಶ್ರೀ ಮಾತಾ ವಿದ್ಯಾಸಂಸ್ಥೆಯಲ್ಲಿ ಪದ್ಮಶ್ರೀ ಹಾಗೂ ರವಿಶಂಕರ್ ಅವರ ಶಾಲೆಯ ಬೊಂಬೆ ಮನೆಗೆ ಭೇಟಿ ನೀಡಿ ಬೊಂಬೆಗಳನ್ನು ವೀಕ್ಷಿಸಿ ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದರೂ, ಇಂದಿನ ದಿನದಲ್ಲಿ ಯುವ ಜನತೆ ಸಂಸ್ಕೃತಿ ಹಾಗೂ ಪರಂಪರೆಯನ್ನು ಮರೆಯುತ್ತಿರುವುದು ವಿಪರ್ಯಾಸ ಎಂದು ಬೇಸರಿಸಿದರು.
ಹಬ್ಬಹರಿದಿನಗಳು ಪರಂಪರೆಯಿಂದ ವಿಶೇಷ ಸ್ಥಾನಮಾನ ಹೊಂದುವ ಮೂಲಕ ತನ್ನದೆಯಾದ ಹಿನ್ನೆಲೆ ಹೊಂದಿವೆ. ಅದರಲ್ಲಿ ದಸರಾ ಹಬ್ಬ ಬಹುದೊಡ್ಡ ಸಂಭ್ರಮವಾಗಿದೆ. ಈ ಹಬ್ಬದಲ್ಲಿ ದಸರಾ ಗೊಂಬೆಗಳನ್ನು ಕುರಿಸುವ ಮೂಲಕ ವಿಶೇಷವಾಗಿ ಸಾಂಸ್ಕೃತಿಕ ನಗರದಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಪ್ರತಿಯೊಬ್ಬರು ಸಂಸ್ಕೃತಿ ಉಳಿಯುವಿಕೆಗಾಗಿ ಶ್ರಮಿಸಬೇಕು. ನಮ್ಮ ಸಂಪ್ರದಾಯ ಮತ್ತು ಧಾರ್ಮಿಕತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುಗಳು ಒಗ್ಗಟ್ಟಾಗಿ ಕಲೆತು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎಂದು ಕರೆ ನೀಡಿದರು.