Mysore
20
overcast clouds
Light
Dark

ನಾನು ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ಶ್ರೀನಿವಾಸ ಪ್ರಸಾದ್‌ : ಯಡಿಯೂರಪ್ಪ

ಮೈಸೂರು : ನಾನು ಕಂಡ ಪ್ರಭಾವಿ ನಾಯಕ, ಸ್ವಾಭಿಮಾನಿ ರಾಜಕಾರಣಿ ಶ್ರೀನಿವಾಸ ಪ್ರಸಾದ್‌ ನಮ್ಮ ನಡುವೆ ಬೌದ್ಧಿಕವಾಗಿ ಇಲ್ಲದಿದ್ದರೂ, ಅವರ ಸೈದ್ಧಾಂತಿಕ ನಿಷ್ಠೆ ಹಾಗೂ ಸಾಧನೆಗಳು ಅವರ ಸಾರ್ಥಕ ಜೀವನಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ ಆವರಣದಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ದಲಿತ ವರ್ಗಕ್ಕೆ ಸೀಮಿತರಾಗದೇ ಎಲ್ಲಾ ವರ್ಗದ ನಾಯಕರಾಗಿದ್ದವರು ಶ್ರೀನಿವಾಸ ಪ್ರಸಾದ್‌ ಎಂದು ತಿಳಿಸಿದರು.

ಪ್ರಸಾದ್‌ ಎಲ್ಲಾ ವರ್ಗದವರಿಗೂ ನಾಯಕರಾಗಿದ್ದರು ಎಂಬುದಕ್ಕೆ ಭೂಮಿ, ಮನಸ್ವಿನಿ ಅಂತಹ ಜನಪರ ಯೋಜನೆಗಳನ್ನು ನೀಡಿದ್ದೇ  ಸಾಕ್ಷಿ. ಜನಾನುರಾಗಿ ನಾಯಕರಾಗಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದವರು ಪ್ರಸಾದ್ ಎಂದು ಅಭಿಪ್ರಾಯಪಟ್ಟರು.

ನಮ್ಮ ರಾಜಕೀಯ ನಿಲುವುಗಳು ಏನೇ ಇರಲಿ, ಅವರ ಹಿರಿತನ ಹಾಗೂ ಅವರ ಬದ್ದತೆಗಳಿಗೆ ಎಂದೂ ಕೊರತೆ ಇರಲಿಲ್ಲ. ಆದರೆ ಏಪ್ರಿಲ್‌ 29ರಂದು ಅವರ ಸಾಧಕ ಜೀವನ ಅಂತ್ಯವಾಗಿದ್ದು ದುಖಃದ ವಿಚಾರ ಎಂದರು.

ತಮ್ಮ ಸುದೀರ್ಘ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನಲೆಯಲ್ಲಿ, ಕಳೆದ ಮಾರ್ಚ್‌ 17ರಂದು ಸುವರ್ಣ ಮಹೋತ್ಸವ ಆಚರಿಸಿ ಚುನವಣಾ ರಾಜಕೀಯ ಹಾಗೂ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದರು. ಆದರೇ ತಮ್ಮ ಉಸಿರು ಇರುವವರೆಗೆ ತಮ್ಮ ಸ್ವಾಭಿಮಾನ  ಹಾಗೂ ಸೈದ್ಧಾಂತಿಕ ನಿಲುವುಗಳನ್ನು ಕೈಬಿಡಲಿಲ್ಲ ಎಂದರು.

ಶೋಷಿತರ ಪರ ಧ್ವನಿಯಾಗಿ ಹೇಗಿರಬೇಕು ಎಂದು ಪ್ರಸಾದ್‌ ತಿಳಿಸಿಕೊಟ್ಟಿದ್ದಾರೆ. ಅವರ ರಾಜಕೀಯ ಜೀವ ಎಲ್ಲರಿಗೂ ಪ್ರೇರಣೆಯಾಗಿದೆ. ಶ್ರೀನಿವಾಸ ಪ್ರಸಾದ್‌ ಅವರ ನಿಧನದಿಂದ ಒಬ್ಬ ಹಿರಿಯ ನೇತಾರರನ್ನು ಕಳೆದುಕೊಂಡಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.