ಮೈಸೂರು: ಶ್ರೀ ರಾಮನವಮಿ ಸಮಾನತೆ, ವೈಚಾರಿಕತೆ, ಆದರ್ಶಗಳಿಂದ ಕೂಡಿದ ಸಮ ಸಮಾಜದ ಪರಿಕಲ್ಪನೆಯಾಗಿದ್ದು, ನಮಗೆ ಸದಾ ಪ್ರೇರಣೆಯಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಚಾಮರಾಜ ಕ್ಷೇತ್ರದ ಶಿವರಾಂಪೇಟೆಯಲ್ಲಿನ ಶ್ರೀರಾಮಮಂದಿರದಲ್ಲಿ ರಾಮ ನವಮಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಾರಿಯ ಶ್ರೀರಾಮ ನವಮಿಯು ಭಾರತೀಯರಿಗೆ ಅತೀ ವಿಶೇಷವಾಗಿದ್ದು, 5 ಶತಮಾನಗಳ ಭಾರತೀಯರ ಕನಸು ನನಸಾಗಿದೆ. ಲಕ್ಷಾಂತರ ಜನರ ತ್ಯಾಗ ಬಲಿದಾನಗಳಿಂದ ಭಾರತೀಯರ ಅಸ್ಮಿತೆಯಾಗಿ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲಾಗುವುದು ಎಂದರು.
ಶ್ರೀರಾಮನ ಆದರ್ಶ, ಪ್ರಜಾಸೇವೆಯ ಪರಂಪರೆಯನ್ನು ಮೈಸೂರಿನ ಯದುವಂಶದ ಅರಸರು ಮುಂದುವರಿಸಿಕೊಂಡು ಬಂದಿದ್ದು, ‘ಸರ್ವರಿಗೂ ಸಮಬಾಳು-ಸರ್ವರಿಗೂ ಸಮ ಪಾಲು’ ಧೈಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಪ್ರಜಾಸೇವೆಗೆ ಅವಕಾಶ ಬಯಸಿದ್ದು, ತಮ್ಮನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.





