ಮೈಸೂರು : ಐಎಎಸ್, ಐಪಿಎಸ್ ಹಾಗೂ ಕೆಎಎಸ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿ ಓದಿ ಹೈರಣಾಗುವ ಬದಲಿಗೆ ರಾಜಕೀಯ ಪ್ರವೇಶ ಮಾಡಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ. ಸರ್ಕಾರಿ ಉದ್ಯೋಗಗಳನ್ನು ನಂಬಿ ಕೂರಬೇಡಿ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ರವಿ ಡಿ.ಚನ್ನಣ್ಣನವರ್ ಕರೆ ನೀಡಿದರು.
ವಿಜಯನಗರದ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 22ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬರೀ ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕೆಂದು ಕಾಲ ಕಳೆಯಬೇಡಿ. ಹದಿನೈದು ಲಕ್ಷ ಜನರಲ್ಲಿ 250 ಮಂದಿಗೆ ಅವಕಾಶ ಸಿಗಲಿದೆ. ಅದರಲ್ಲಿ ಪರಿಶಿಷ್ಟಜಾತಿಗೆ 18, ಪರಿಶಿಷ್ಟಪಂಗಡಕ್ಕೆ 7, ಹಿಂದುಳಿದ ವರ್ಗಕ್ಕೆ 32 ಸ್ಥಾನಗಳು ದೊರೆಯಲಿವೆ. ಈ 54 ಸ್ಥಾನಗಳನ್ನು ಪಡೆಯಲು ನಾವು ಓದಿ ಓದಿ ಹೈರಣಾಗುವ ಬದಲಿಗೆ ಸ್ವಯಂ ಉಳುವೆ, ಎರಡು ಕುರಿ, ಎತ್ತು ಮೇಯಿಸಿದರೆ ಸಾಕು. ಸರ್ಕಾರಿ ಉದ್ಯೋಗಗಳನ್ನು ನಂಬಿ ಕೂರಬೇಡಿ ಎಂದು ಕಿವಿಮಾತು ಹೇಳಿದರು.
ವಿದ್ಯೆ ಕಲಿಸಿದ ಗುರುವಿಗೆ ಬೆರಳನ್ನು ಕತ್ತರಿಸಿಕೊಟ್ಟ ಏಕಲವ್ಯನಾಗುವ ಬದಲಿಗೆ ಮದಕರಿನಾಯಕನಾಗಿ ಅನ್ಯಾಯ, ದೌರ್ಜನ್ಯದ ವಿರುದ್ಧ ಹೋರಾಟ ಮಾಡಬೇಕು. ಶ್ರೇಣಿಕೃತ ಸಮಾಜದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಅಸಮಾನತೆ ತಾಂಡವವಾಡುತ್ತಿದೆ. ಹೀಗಾದ್ದಾಗ ನೀವು ಆರ್ಥಿಕವಾಗಿ ಸಬಲರಾಗದೇ ಯಾರ ಹೊಟ್ಟೆ ತುಂಬಿಸಲಾಗದು ಎಂದು ಅಭಿಪ್ರಾಯಿಸಿದರು.ಆರ್ಥಿಕವಾಗಿ ಸಬಲನಾಗದಿದ್ದರೆ ಯಾರ ಹೊಟ್ಟೆ ತುಂಬಿಸಲಾಗದು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ನಾಯಕ ಜನಾಂಗ ನಾಲ್ಕನೇ ದೊಡ್ಡ ಸ್ಥಾನದಲ್ಲಿದೆ. ವರ್ತಮಾನದಲ್ಲಿ ದೊಡ್ಡ ಅಸಡ್ಡೆಯಿಂದ ಕಾಲಕಳೆಯುತ್ತಿದ್ದೇವೆ. ಈಗ ಬಹುದೊಡ್ಡ ಶೂನ್ಯವಾಗಿದೆ. ನಾವು ಹಳೆಯ ಕಾಲದ ಬಿರುದುಗಳನ್ನು ಹೇಳಿಕೊಂಡು ಕೂರುವ ಬದಲಿಗೆ ಇನ್ನೊಂದು ಹೋರಾಟದ ಅವಶ್ಯಕತೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಡಿ ಪಡೆಯುವುದು ಹೆಚ್ಚು. ಹೋರಾಡಿಯೇ ಪಡೆಯಬೇಕು ಎಂದು ಕರೆ ನೀಡಿದರು.





