ಮೈಸೂರು: ಬಿಸಿಸಿಐ ಆಯೋಜನೆ ಮಾಡಿರುವ 19 ವರ್ಷದೊಳಗಿನ ಆಟಗಾರರ ಕೂಚ್ ಬಿಹಾರ್ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಗ ಸಮಿತ್ ದ್ರಾವಿಡ್ ಆಟವನ್ನು ದ್ರಾವಿಡ್ ದಂಪತಿಗಳು ಕಣ್ತುಂಬಿಕೊಂಡರು.
ನಗರದ ಮಾನಸಗಂಗೋತ್ರಿಯ ಶ್ರೀಕಂಠದತ್ತ ಒಡೆಯರ್ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರಿಕೆಟಟ್ ಅಸೋಸಿಯೇಷನ್ ಮೈಸೂರು ವಲಯದ ಸಹಕಾರದಿಂದ ಕರ್ನಾಕಟ ಹಾಗೂ ಉತ್ತರಖಂಡ್ ನಡುವಿನ ನಾಲ್ಕು ದಿನಗಳ ಪಂದ್ಯ ಆರಂಭವಾಗಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ತಂಡಗಳ ನಡುವೆ ಪಂದ್ಯ ನಡೆಯಲಿದ್ದು , ಸದ್ಯ ಕರ್ನಾಟಕ ಹಾಗೂ ಉತ್ತರಖಂಡ್ ಪಂದ್ಯಾವಳಿ ಮೈಸೂರಿನಲ್ಲಿ ನಡೆಯುತ್ತಿದೆ.
ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಪ್ರತಿನಿಧಿಸುತ್ತಿದ್ದಾರೆ. ಮಗನ ಆಟವನ್ನು ನೋಡಲು ಪತ್ನಿ ಡಾ.ವಿಜೇತರೊಂದಿಗೆ ದ್ರಾವಿಡ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಸ್ಟೆಪ್ಸ್ ಮೇಲೆ ಕೂತು ಆಟ ವೀಕ್ಷಿಸಿದ ʼದಿ ವಾಲ್ʼ
ಸಾಮಾನ್ಯವಾಗಿ ಯಾರೇ ಮುಖ್ಯ ಅತಿಥಿಗಳು ಕ್ರಿಕೆಟ್ ವೀಕ್ಷಣೆಗೆ ಬಂದರೂ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಕಚೇರಿ ಅಥವ ಗಣ್ಯರು ಕುಳಿತುಕೊಳ್ಳುವ ಸ್ಥಳದಲ್ಲಿ ಕೂತು ಪಂದ್ಯ ವೀಕ್ಷಣೆ ಮಾಡುತ್ತಾರೆ. ಆದರೆ ದ್ರಾವಿಡ್ ದಂಪತಿಗಳು ಸಾಮಾನ್ಯರಲ್ಲಿ ಸಾಮಾನ್ಯರಂತೆ ಕ್ರೀಡಾಂಗಣದ ಸುತ್ತ ಇರುವ ಮೆಟ್ಟಲಿನ ಮೇಲೆ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದು ಎಲ್ಲರ ಗಮನ ಸೇಳೆದಿತ್ತು.