ಮೈಸೂರು : ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಕೊಡುವವರು ಇರುವವರೆಗೂ ಭ್ರಷ್ಟಚಾರ ನಡೆಯುತ್ತಲೇ ಇರುತ್ತದೆ ಎಂದು ಉಪ ಲೋಕಾಯುಕ್ತ ಕೆ .ಎನ್ ಫಣೀಂದ್ರ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ದೂರುದಾರರು ಹಾಗೂ ಎದುರುದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವ ಆರೋಗ್ಯವಂತ ಜೀವನ ಮಾಡಬೇಕು. ಇದಕ್ಕೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಹೆಣ್ಣು ಮಗುವಾಗಲೀ ಗಂಡು ಮಗುವಾಗಲಿ ಭ್ರೂಣ ಹತ್ಯೆ ಮಾಡುವ ಹಾಗಿಲ್ಲ. ಇದು ಶಿಕ್ಷಾರ್ಹ ಅಪರಾಧ. ನಾವು ಭ್ರಷ್ಟಚಾರವನ್ನು ಮುಕ್ತ ಮಾಡಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ದೂರುದಾರರು 4 ಎಕರೆ ಜಮೀನನ್ನು ಬೇರೆಯವರಿಂದ ಕೊಂಡುಕೊಂಡು ಇದ್ದೆವು. ಆದರೆ ನಮಗೆ ಮೂರೂವರೆ ಎಕರೆ ಮಾತ್ರ ಖಾತೆ ಆಗಿದೆ ಎಂದು ದೂರು ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಸಿದ ಸರ್ವೇ ಇಲಾಖೆಯ ಅಧಿಕಾರಿ 20 ಗುಂಟೆ ಜಮೀನು ರಸ್ತೆಗೆ ಹೋಗಿರುತ್ತದೆ. ಅಲ್ಲಿ ಇರುವುದು ಮೂರೂವರೆ ಎಕರೆ ಜಮೀನು ಮಾತ್ರ ಇದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಸಿದ ಉಪ ಲೋಕಾಯುಕ್ತರಾದ ಫಣೀಂದ್ರ ಅವರು ದೂರುದಾರರಿಗೆ ಸಮಾಧಾನ ಇಲ್ಲ ಅಂದರೆ ಜೆಡಿಎಲ್ ಆರ್ ಅವರಿಗೆ ಅಪೀಲು ಸಲ್ಲಿಸುವಂತೆ ಅಲ್ಲಿಯೂ ನಿಮಗೆ ಸಮಾಧಾನ ಆಗದೆ ಇದ್ದರೆ ನೀವು ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿದರು.
ಹಿಂದೆ ತಾತ್ಕಾಲಿಕ ಪಡಿತರ ಚೀಟಿ ನೀಡಿದ್ದರು. ಹೊಸ ಪಡಿತರ ಚೀಟಿ ನೀಡಿಲ್ಲ ಎಂದು ದೂರು ನೀಡಿದ್ದರು, ಎದುರುದಾರರಾದ ಆಹಾರ ನಿರೀಕ್ಷಕರು ಪಡಿತರ ಚೀಟಿ ನೀಡಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಧಾರ್ ಕಾರ್ಡ್ ನೀಡಬೇಕು. ಇವರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿಲ್ಲ. ಪಡಿತರ ಚೀಟಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ತಕ್ಷಣ ಹೊಸ ಪಡಿತರ ಚೀಟಿ ನೀಡಲಾಗುವುದು ಎಂದು ತಿಳಿಸಿದರು. ಒಂದು ತಿಂಗಳ ಒಳಗೆ ಹೊಸ ಪಡಿತರ ಚೀಟಿ ನೀಡಲು ಸೂಚನೆ ನೀಡಲಾಯಿತು.
ಹುಣಸೂರು ತಾಲ್ಲೂಕಿನಲ್ಲಿ ಸರ್ಕಾರಿ ಜಾಗವನ್ನು 2 ಬಾರಿ ತೆರವುಗೊಳಿಸಿದರು ಖಾಸಗಿ ವ್ಯಕ್ತಿ ಪುನಃ ಅತಿಕ್ರಮಿಸಿದ್ದಾನೆ. ಈ ಬಗ್ಗೆ ಗಂಭೀರ ಕ್ರಮ ಕೈಗೊಂಡು ತೆರವು ಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಿದರು.
ಲೋಕಾಯುಕ್ತ ಜಂಟಿ ನಿಬಂಧಕರು(ವಿಚಾರಣೆ) ವಿ.ಎನ್.ವಿಮಲಾ, ಲೋಕಾಯುಕ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಮರ್ ನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಮೈಸೂರು ಪೋಲಿಸ್ ಆಯುಕ್ತೆ ಸೀಮಾ ಲಾಟ್ಕರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಸ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





