Mysore
20
overcast clouds
Light
Dark

ಪ್ರತಾಪ್‌ ಸಿಂಹಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ: ಬಿ.ವೈ ವಿಜಯೇಂದ್ರ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಪ್ರತಾಪ್‌ ಸಿಂಹರಿಗೆ ಟಿಕೆಟ್‌ ಕೈ ತಪ್ಪಿದೆ ಆದರೆ, ಅವರಿಗೆ ಮುಂದೆ ರಾಜ್ಯ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮೈಸೂರಿನಲ್ಲಿ ಹೇಳಿದ್ದಾರೆ.

ನಗರದಲ್ಲಿ ಆಯೋಜಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶದಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳ ಕಾಲ ಕ್ರೀಯಾಶೀಲಾ ಸಂಸದರಾಗಿ ಪ್ರತಾಪ್‌ ಸಿಂಹ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದರ ನಡುವೆಯೂ ಕೂಡಾ ಪ್ರಧಾನಿ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನೇಮಕ ಮಾಡಿದ್ದಾರೆ. ಆದರೆ ಇದರ ಹಿಂದೆ ಪ್ರತಾಪ್‌ ಸಿಂಹ ಅವರಿಗೆ ಕರ್ನಾಟಕ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಇರುವುದನ್ನು ಮರೆಯಬಾರದು ಎಂದು ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ ಬಗ್ಗೆ ವಿವರಿಸಿದರು.

ಇದರ ಜೊತೆಗೆ ಯದುವೀರ್‌ ಮೈಸೂರು ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕು ಎಂಬುದು ರಾಷ್ಟ್ರೀಯ ವರಿಷ್ಠರ ತೀರ್ಮಾನವಾಗಿದೆ. ಮೈಸೂರು ರಾಷ್ಟ್ರದ ಏಳಿಗೆಗಾಗಿ ಮಹಾರಾಜರು ತಮ್ಮ ಜೀವನವನ್ನೇ ಸವೆಸಿದ ರೀತಿಯಲ್ಲಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಸಾಮಾನ್ಯ ವ್ಯಕ್ತಿಯ ಹಾಗೆ ರಾಜವಂಶಸ್ಥ ಯದುವೀರ್‌ ಅವರು ಕೆಲಸ ಮಾಡಲಿದ್ದಾರೆ ಎಂದರು.

ಇನ್ನು ಚಾಮರಾಜನಗರಕ್ಕೆ ಸರಳ ವ್ಯಕ್ತಿತ್ವದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಗೆಲ್ಲಿಸುವ ಜವಾಬ್ದಾರಿ ಪ್ರಜೆಗಳ ಮೇಲಿದೆ. ಅವರು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.