Mysore
20
overcast clouds
Light
Dark

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬೇಸರವಾಗಿದೆ: ಪ್ರತಾಪ್‌ ಸಿಂಹ ಹೀಗೆಳೀದ್ದೇಕೆ?

ಮೈಸೂರು: ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮಗೆ ಮುಡಾದಿಂದ ನೀಡಲಾಗಿರುವ ನಿವೇಶವನ್ನು ಮುಡಾಕ್ಕೆ ಹಿಂತಿರುಗಿಸುವ ಮೂಲಕ ಮೇಲ್ಪಂಕ್ತಿ ಹಾಕಿ ಕೊಡಬಹುದಾಗಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ. ಆ ಮೂಲಕ ಈವರೆಗೆ ನಾನು ಅವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಹುಸಿಯಾಗಿಸುವ ಮೂಲಕ ಒಬ್ಬ ಮೈಸೂರಿಗನಿಗೆ ಅವರು ನಿರಾಸೆ ಮಾಡಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್‌ ಸಿಂಹ ಹತಾಶೆ ವ್ಯಕ್ತಪಡಿಸಿದರು.

ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಜು.22) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಒಂದೇ ಒಂದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಲ್ಲ. ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೇ ಬದುಕಿದ ರಾಜಕಾರಣಿ. ಅಂತವರ ವಿರುದ್ಧ ದೂರು ಬಂದಿರುವುದಕ್ಕೆ ಮತನಾಡುತ್ತಿದ್ದೇನೆ ಎಂದರು.

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಸಿದ್ದರಾಮಯ್ಯ ಸಾಹೇಬ್ರು ಹಾಗೂ ನನಗೆ ಕೇವಲ ಸೈದ್ಧಾಂತಿಕ ಹಾಗೂ ಧಾರ್ಮಿಕ ವಿಚಾರಗಳಲ್ಲಿ ಮಾತ್ರ ವಿರೋಧ ಹೊರತು, ಅವರನ್ನು ವೈಕ್ತಿಗತವಾಗಿ ಟೀಕಿಸುವ ಗುಣ ನನ್ನಲ್ಲಿಲ್ಲ ಎಂದು ಹೇಳಿದರು.

ಮುಡಾ ಹಗರಣದಲ್ಲಿ ಸಿಎಂ ಅವರಿಗೆ ಅರಿವಿಲ್ಲದೇ ನಿವೇಶನ ಸಿಕ್ಕಿರಬಹುದು. ಈ ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಅವರು ಸಹಾ ತಪ್ಪು ಮಾಡಿರಬಹುದು. ಇದೆಲ್ಲವನ್ನು ಹದಿನಾಲ್ಕು ಬಾರಿ ಬಜೆಟ್‌ ಮಂಡಿಸಿದ, ಓರ್ವ ವಕೀಲರಾದ ಸಿಎಂ ಸಿದ್ದರಾಮಯ್ಯ ಅವರು ಬದಿಗೊತ್ತಿ, ತಮಗೆ ನೀಡಿರುವ ನಿವೇಶನವನ್ನು ಹಿಂತಿರುಗಿಸಿ ಮುಕ್ತ ತನಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದ್ದರೇ ಅವರ ಮೇಲಿನ ಗೌರವ ಇಮ್ಮಡಿಯಾಗುತ್ತಿತ್ತು.

ಆದರೆ ಅವರು 60ಕೋಟಿ ರೂ ನಿವೇಶನ ಎಂದು ಹೇಳುತ್ತಿರುವುದು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಈ ವಿಚಾರವಾಗಿ ಮೈಸೂರಿಗನಾಗಿ ನನಗೆ ವೈಯಕ್ತಿಕವಾಗಿ ಬೇಸರ, ನಿರಾಸೆ ಉಂಟಾಗಿದೆ ಎಂದು ಪ್ರತಾಪ್‌ ಸಿಂಹ ವಿಷಾಧಿಸಿದರು.