ಮೈಸೂರು: ವಿಧಾನ ಪರಿಷತ್ ನೈಋತ್ಯ ಪದವೀಧರರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೇ ಮಾಡಿದ್ದಾರೆ.
ಈ ಸಂಬಂಧ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಬಂಡಾಯ ಅಭ್ಯರ್ಥಿ ವಿರುದ್ಧ ಶಿಸ್ತು ಉಲ್ಲಂಘನೆ ಆರೋಪದಡಿ ಪಕ್ಷ ಅವರನ್ನು ಉಚ್ಛಾಟಿಸಿತು.
ಇದರ ಬೆನ್ನಲ್ಲೇ ರಘುಪತಿ ಭಟ್ರ ಉಚ್ಛಾಟನೆ ಬಗ್ಗೆ ಹಿಜಾಬ್ ವಿಚಾರವಾಗಿ ಪ್ರಚಾರವಾಗಿದ್ದ ಆಲಿಯಾ ಗೇಲಿ ಮಾಡಿದ್ದರು. ಇಷ್ಟೆಲ್ಲಾ ವಿವಾದ ಬಳಿಕ ಇಂದು ಪ್ರತಾಪ್ ಸಿಂಹ ರಘುಪತಿ ಭಟ್ ಪರವಾಗಿ ಟ್ವೀಟ್ ಮಾಡಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಬಿಜೆಪಿ ರಘುಪತಿಯವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಹೇಳಿದ್ದಾರೆ. ಪ್ರತಾಪ್ ಸಿಂಹ ತಮ್ಮ ಟ್ವೀಟ್ನಲ್ಲಿ “ಉಡುಪಿ ಶಾಲೆಯೊಂದರ ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ ಎಂಎಲ್ಎ ಟಿಕೆಟ್ಟೂ ಸಿಗಲಿಲ್ಲ, ಎಂಎಲ್ಸಿ ಟಿಕೆಟ್ಟನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ” ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ವ್ಯಾಪಕ ವಿರೋಧ ಚರ್ಚೆಯಾಗುತ್ತಿದ್ದ ಬೆನ್ನಲ್ಲೇ ತಮ್ಮ ಟ್ವೀಟನ್ನು ಪ್ರತಾಪ್ ಸಿಂಹ ಅಳಿಸಿ ಹಾಕಿದ್ದಾರೆ.
ಇನ್ನು ಪ್ರತಾಪ್ ಸಿಂಹ ಅವರ ಟ್ವೀಟ್ಗೆ ಕೃತಜ್ಞನತೆ ಸಲ್ಲಿಸಿದ್ದಾರೆ. “ಪ್ರತಾಪ್ ಸಿಂಹ ಅವರಿಗೆ ವಂದನೆಗಳು. ನಿಜವಾದ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಮತ್ತು ಹಿಂದುತ್ವವಾದಿಗಳಿಗೆ ನನ್ನ ನಿಲುವು ಏನೆಂದು ಸ್ಪಷ್ಟವಾಗಿ ತಿಳಿದಿದೆ. ಪರಿವಾರದ ಮನಸ್ಥಿತಿಯ ನಿಷ್ಠಾವಂತ ಕಾರ್ಯಕರ್ತರು ಎಂದಿಗೂ ನನ್ನ ಜೊತೆ ಇದ್ದಾರೆ. ನನ್ನ ಉಸಿರು ಇರುವವರೆಗೆ ಅವರಿಗೆ ಧನಿಯಾಗಿ ಇರುತ್ತೇನೆ” ಎಂದು ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.