ಮೈಸೂರು : ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಒಪ್ಪುತ್ತೇವೆ ಎಂದು ಶಾಸಕ ತನ್ವೀರ್ಸೇಠ್ ಹೇಳಿದರು.
5 ವರ್ಷಗಳ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂದಿರುವ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ, ಪರೋಕ್ಷ ಟಾಂಗ್ ನೀಡಿದರು. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಈ ಹಿಂದೆಯೂ ನಾನು ಹೇಳಿದ್ದೇನೆ. ಜನರು ನಮಗೆ ಅರ್ಶಿವಾದ ನೀಡಿದ್ದಾರೆ. 136 ಶಾಸಕರು ಗೆದ್ದಿದ್ದಾರೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯತೀಂದ್ರ ಅವರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಡಿಕೆಶಿ ಹೇಳಿಕೆಯನ್ನು ಸಮರ್ಥಿಸುತ್ತೇನೆ ಎಂದರು.
ಸಂಪುಟ ಪುನರ್ ರಚನೆ ವಿಳಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಜನವರಿಯಲ್ಲಿ ಆಗತ್ತೆ ಅಂತಿದ್ದರು. ಯಾವ ಜನವರಿ ಅಂತ ಹೇಳಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಯತೀಂದ್ರ ಹಸ್ತಕ್ಷೇಪ ಜಾಸ್ತಿ ಎನ್ನುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಕೇವಲ ನನ್ನ ಕ್ಷೇತ್ರವಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಹಸ್ತಕ್ಷೇಪ ನಡೆಯುತ್ತಿದೆ ಅಂತ ಹೇಳುತ್ತಾರೆ. ಸಮಯ ಬಂದಾಗ ಅದನ್ನು ಹೇಳುತ್ತೇನೆ. ಕೆಲವು ಅಧಿಕಾರಿಗಳು ಶಂಖದಿಂದ ಬಂದರೇ ತೀರ್ಥ ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ. ನಾವು ಕೂಡ ಶಂಕ ಊದುವ ಕೆಲಸ ಮಾಡುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ವಿರುದ್ಧ ಕಿಡಿಕಾರಿದರು.





