ಮೈಸೂರು: ‘ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ’ ಎಂಬ ಮಾತಿನಂತೆ ದಸರಾ ಮುಗಿದರೂ ‘ಸಾಂಸ್ಕೃತಿಕ ನಗರಿ’ಗೆ ಬರುವ ಪ್ರವಾಸಿಗರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ದಸರಾ ಬಳಿಕವೂ ಮೈಸೂರಿನತ್ತ ಪ್ರವಾಸಿಗರ ದಂಡು ಹರಿದು ಬಂದಿದ್ದು, ಎಲ್ಲಾ ಕಡೆ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುತ್ತಿದ್ದರು ಇನ್ನು ಅಲ್ಲೇ ಇದ್ದ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸ ಪಡುವಂತಾಯಿತು.
ನಗರದ ಹಾರ್ಡಿಂಗ್ ವೃತ್ತ, ಕೆ.ಆರ್ ವೃತ್ತ, ಅಗ್ರಹಾರ, ಸಿ ಟಿ ಬಸ್ ಸ್ಟ್ಯಾಂಡ್ , ಸಯ್ಯಾಜಿ ರಾವ್ ರಸ್ತೆ, ಇರ್ವಿನ್ ರಸ್ತೆ, ಅಯುರ್ವೇದಿಕ್ ಆಸ್ಪತ್ರೆ ರಸ್ತೆಗಳಲ್ಲಿ ಜನಸಾಗರ ಕಂಡು ಬಂತು.
ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವ ಸರಳವಾಗಿ ನಡೆದಿತ್ತು. ಹಾಗಾಗಿ ವ್ಯಾಪಾರ, ವಹಿವಾಟು ಮತ್ತು ಪ್ರವಾಸೋದ್ಯಮ ನೆಲಕಚ್ಚಿತ್ತು. ಆದರೆ, ಈ ಬಾರಿ ಸರಕಾರ ಅದ್ಧೂರಿ ದಸರಾ ಆಚರಣೆ ಮಾಡಿದ ಪರಿಣಾಮ ಪ್ರವಾಸೋದ್ಯಮ ಚೇತರಿಕೆಗೆ ಅವಕಾಶ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪ್ರವಾಸಿಗರು ಓಡಾಡಿಕೊಂಡಿದ್ದ ದೃಶ್ಯ ಕಣ್ಣಿಗೆ ಬಿತ್ತು