Mysore
33
scattered clouds

Social Media

ಭಾನುವಾರ, 29 ಮಾರ್ಚ್ 2026
Light
Dark

ದಕ್ಷಿಣ ಕಾಶಿಯ ಪಂಚ ಮಹಾರಥೋತ್ಸವಕ್ಕೆ ಭಾರಿ ಸಿದ್ಧತೆ  

ಯಶಸ್ವಿಯಾಗಿ ಜಾತ್ರೆ ನಡೆಸಲು ಶಾಸಕ, ಡಿಸಿ ಪಣ; ರಥೋತ್ಸವದ ನಂತರ ವಿವಿಧೆಡೆ ಅರವಟ್ಟಿಗೆಗಳ ಸೇವೆ 

ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ಜಾತ್ರೆಗೆ ಈ ಬಾರಿ ಸಕಲ ಸಿದ್ಧತೆ ನಡೆಸಲಾಗಿದೆ. ಪಂಚ ಮಹಾ ರಥೋತ್ಸವವನ್ನು ಲೋಪದೋಷಗಳಿಲ್ಲದೆ ಅದ್ಧೂರಿಯಾಗಿ ನಡೆಸಬೇಕು ಎಂದು ಪಣ ತೊಟ್ಟಿರುವ ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ತಲಾಎರಡು ಸಭೆಗಳನ್ನು ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಜಿಲ್ಲಾಧಿಕಾರಿಗಳಂತೂ ಜಾತ್ರೋತ್ಸವದ ಸಿದ್ಧತೆಗಾಗಿಯೇ ಮೂರು ಬಾರಿ ಭೇಟಿ ನೀಡಿದ್ದು, ಪ್ರತಿಯೊಬ್ಬ ಅಧಿಕಾರಿಗೂ ಅವರ ಜವಾಬ್ದಾರಿಗಳನ್ನು ಹಂಚಿ ಅಡೆ ತಡೆಯಿಲ್ಲದೆ, ಲೋಪಗಳು ಬಾರದಂತೆ ಜಾತ್ರೆಯನ್ನು ಸಂಪನ್ನಗೊಳಿಸಲು ಶಾಸಕರೊಂದಿಗೆ ಮುತುವರ್ಜಿ ವಹಿಸಿದ್ದಾರೆ.

ಅರವಟ್ಟಿಗೆಗಳ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ನಂಜನಗೂಡು ಶ್ರೀಕಂಠೇ ಶ್ವರನ ಪಂಚ ಮಹಾರಥೋತ್ಸವದಲ್ಲಿ ಅರವಟ್ಟಿಗೆಗಳ ವಿತರಣೆಗೆ ಈ ಬಾರಿಯೂ ಭಾರೀ ಸಿದ್ಧತೆ ಆರಂಭವಾಗಿದೆ. ಸೋಮವಾರ ಬೆಳಿಗ್ಗೆ ೫.೫೦ರಿಂದ ೬.೩೦ರೊಳಗೆ ನಡೆಯುವ ಶ್ರೀಕಂಠೇಶ್ವರನ ರಥಾರೋಹಣದ ನಂತರ ನಂಜನ ಗೂಡಿನ ಬೀದಿಬೀದಿಗಳಲ್ಲಿ ಅರವಟ್ಟಿಗೆಗಳ ವಿತರಣೆ ಆರಂಭವಾಗಲಿದೆ.

ದೇವಾಲಯದ ದಾಸೋಹ ಭವನದಲ್ಲಿ ಹತ್ತಾರು ಸಾವಿರ ಜನರಿಗೆ ಪ್ರಸಾದ ವಿತರಣೆ ನಡೆದರೆ, ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಬೆಂಗಳೂರಿನ ಶಾರದಾ ರಾಜಗೋಪಾಲ ಕುಟುಂಬ ನೀರು, ಮಜ್ಜಿಗೆ, ಬೇಲದ ಹಣ್ಣಿನ ಪಾನಕ, ಕೋಸಂಬರಿವಿತರಣೆಗೆ ಸಿದ್ಧತೆ ನಡೆಸಿದೆ.

ಬೆಂಗಳೂರಿನ ಮಲ್ಲೇಶ್ವರಂನ ಶ್ರೀಕಂಠೇಶ್ವರ ಸೇವಾ ಸಂಘದ ನೇತೃತ್ವದಲ್ಲಿ ಸಿಹಿತಿನಿಸುಗಳ ತಯಾರಿಕೆ ಎಂದಿನಂತೆ ಈ ಬಾರಿಯೂ ಭರದಿಂದ ಸಾಗಿದೆ. ಸಂಸ್ಥೆಯ ಕಳೆದ ೪೦ ವರ್ಷಗಳಿಂದ ಶ್ರೀಕಂಠೇಶ್ವರನ ಜಾತ್ರೆಯಲ್ಲಿ ಅರವಟ್ಟಿಗೆಗಳ ಸೇವೆಯನ್ನು ನಡೆಸುತ್ತಿದ್ದು, ಆ ನೆನಪಿಗಾಗಿ ಈ ಬಾರಿ ಜಾತ್ರೆಗೆ ಆಗಮಿಸುವ ಲಕ್ಷಾಂತರ ಜನರಿಗೆ ಸಿಹಿ ಹಂಚಲು ತಯಾರಿ ನಡೆದಿದೆ ಎನ್ನುತ್ತಾರೆ ಅದರ ಸಂಸ್ಥಾಪಕರು ಹಾಗೂ ಹಾಲಿ ಗೌರವಾಧ್ಯಕ್ಷರೂ ಆಗಿರುವ ಬೆಂಗಳೂರು ನಗರಪಾಲಿಕೆಯ ಮಾಜಿ ಸದಸ್ಯ ಎನ್.ಎ.ಚಿದಂಬರ್. ಈ ವಿತರಣೆಯಲ್ಲದೆ ಕಾಮಾಕ್ಷಿ ಬಾಯಿ ಕಲ್ಯಾಣ ಮಂಟಪದಲ್ಲಿ ಭಾನು ವಾರ, ಸೋಮವಾರಗಳಂದು ಹತ್ತಾರು ಸಾವಿರ ಜನರಿಗೆ ಭೂರಿ ಭೋಜನ ಏರ್ಪಡಿಸಲಾಗಿದೆ. ದೊಡ್ಡಬಳ್ಳಾಪುರದ ನಂಜುಂಡೇಶ್ವರನ ಭಕ್ತರು ಶ್ರೀಕಂಠೇಶ್ವರ ದೇವಾಲಯದ ಹಿಂಭಾಗದ ವೀರಭದ್ರ ಮಂಟಪದ ಆವರಣ ಹಾಗೂ ನಂಜುಂಡೇಶ್ವರ ಸಂಘ, ಗಿರಿಜಾ ಕಲ್ಯಾಣ ಮಂದಿರಗಳಲ್ಲಿ ಭೂರಿ ಭೋಜನದ ವ್ಯವಸ್ಥೆ ಕೈಗೊಂಡಿದ್ದರೆ, ನಂಜುಂಡೇಶ್ವರ ಭವನದಲ್ಲಿ ಪ್ರಸಾದ ವಿತರಣೆ ನಡೆಯಲಿದೆ.

ಇದಲ್ಲದೆ, ನಂಜನಗೂಡು ಬ್ರಾಹ್ಮಣ ಯುವ ಸಮಿತಿ, ಎ.ವಿ.ನಾರಾ ಯಣ ಮಿತ್ರ ಮಂಡಳಿ, ತಾಲ್ಲೂಕು ಕಂದಾಯ ನೌಕರರ ಸಂಘ, ಆರ‍್ಯವೈಶ್ಯ ಮಂಡಳಿ, ವಿಶ್ವಕರ್ಮ ಸಂಘ, ಎಟಿ ಅಂಡ್ ಎಸ್ ನೌಕರರ ಸಂಘ, ನೆಸ್ಲೆ ಉದ್ಯೋಗಿಗಳ ಸಂಘ, ಕುಂಬಾರರ ಸಂಘ, ಜೈನ್ ಮಹಾಸಭಾ, ರೀಡ್ ಅಂಡ್ ಟೈಲರ್ ಉದ್ಯೋಗಿಗಳ ವೇದಿಕೆ, ವಿನಾಯಕ ಮಿತ್ರ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬಿಸಿಬೇಳೆ ಬಾತ್, ವಾಂಗಿ ಬಾತ್, ಚಿತ್ರಾನ್ನ, ಮೊಸ ರನ್ನ, ಪುಳಿಯೋಗರೆ ಸಹಿತ ನೀರು ಮಜ್ಜಿಗೆ, ಪಾನಕ, ಕೋಸಂಬರಿ, ಹಣ್ಣು ಗಳು, ಸಿಹಿ ತಿಂಡಿಗಳು, ಚಾಕೊಲೇಟ್, ಐಸ್‌ಕ್ರೀಮ್ ಗಳನ್ನು ರಥಬೀದಿಯ ನ್ನೊಳಗೊಂಡಂತೆ ನಗರದ ವಿವಿಧೆಡೆ ವಿತರಿಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿವೆ.

” ನಮ್ಮ ಸಂಸ್ಥೆ ಬೆಂಗಳೂರಲ್ಲಿ ಸಮಾಜ ಮುಖಿ ಕಾರ್ಯಕ್ರಮ ಗಳನ್ನು ನಡೆಸುವ ಸೇವಾ ಸಂಸ್ಥೆಯಾಗಿದ್ದು, ನಂಜನಗೂಡು ಜಾತ್ರೆಯಲ್ಲಿ ಪ್ರತಿ ವರ್ಷ ಹಸಿದು ಬಂದವರಿಗೆಲ್ಲ ಭೋಜನ ಹಾಗೂ ಜಾತ್ರೆಗೆ ಆಗಮಿಸಿದವರಿಗೆ ಸಿಹಿ ವಿತರಿಸುವ ಕೈಂಕರ‍್ಯವನ್ನು ಕಳೆದ ೪೦ ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಮುಂದೆಯೂ ನಡೆಸುತ್ತದೆ.”

-ಎನ್.ವಿ.ಚಿದಂಬರ್, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು

ಸಿಂಗಾರಗೊಂಡ ರಥಗಳು: 

ಶ್ರೀಕಂಠೇಶ್ವರ ಸೇರಿದಂತೆ ತಾಯಿ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರರ ರಥಾರೋಹಣಕ್ಕೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಅವರ ನೇತೃತ್ವದಲ್ಲಿ ಪಂಚಮಹಾರಥಗಳು ಸಿಂಗಾರಗೊಂಡಿವೆ

 

 

Tags:
error: Content is protected !!