ನಂಜನಗೂಡು: ಗೃಹ ಸಚಿವ ಡಾ.ಜಿ ಪರಮೇಶ್ವರ್ ರವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿರುವುದು ಖಂಡನೀಯ ಎಂದು ಡಾ.ಜಿ ಪರಮೇಶ್ವರ್ ಯುವ ಸೈನ್ಯದ ಮೈಸೂರು ಜಿಲ್ಲಾಧ್ಯಕ್ಷ ಸಿ. ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವರಾದ ಸರಳ ಸಜ್ಜನಿಕೆಯ ರಾಜಕಾರಣಿ ಡಾ.ಜಿ ಪರಮೇಶ್ವರ್ ರವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದೆ. ಉದ್ದೇಶಪೂರ್ವಕವಾಗಿ ದಾಳಿ ಮಾಡಲಾಗಿದ್ದು, ಬಿಜೆಪಿ ನಾಯಕರನ್ನು ಬಿಟ್ಟು ಕಾಂಗ್ರೆಸ್ ನಾಯಕರ ಮೇಲೆ ಪದೇಪದೇ ಇಡಿ ದಾಳಿ ನಡೆಸುತ್ತಿರುವುದು ಖಂಡನೀಯ. ಮುಂದಿನ ಮುಖ್ಯಮಂತ್ರಿಗಳು ಆಗುತ್ತಾರೆ ಅದಕ್ಕೆ ಅವರನ್ನು ಕುಗ್ಗಿಸಲು ಈ ರೀತಿ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಅವರು ಕುಗ್ಗುವುದಿಲ್ಲ. ಇಡಿ ದಾಳಿಯು ರಾಜಕೀಯ ಪ್ರೇರಿತವಾಗಿದೆ. ಬೇರೆಬೇರೆ ನಾಯಕರ ಶಿಕ್ಷಣ ಸಂಸ್ಥೆಗಳು ಇದ್ದರು, ಅವರ ಮೇಲೆ ದಾಳಿ ಆಗುತ್ತಿಲ್ಲ. 2019ರಲ್ಲಿಯೂ ಪರಮೇಶ್ವರ್ ರವರ ಮೇಲೆ ಇಡಿ ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಅವರಿಗೆ ಏನು ಸಿಗಲಿಲ್ಲ. ಅವರನ್ನೇ ಯಾಕೇ ಟಾರ್ಗೆಟ್ ಮಾಡಲಾಗುತ್ತಿದೆ. ಬಿಜೆಪಿ ನಾಯಕರನ್ನು ಬಿಟ್ಟು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸುತ್ತಿರುವುದನ್ನು ನೋಡಿದರೆ ನಮಗೆ ಅನುಮಾನ ವ್ಯಕ್ತವಾಗುತ್ತಿದೆ.
ಕಳೆದ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮೇಲೆ ನೀಡಿ ಇಡಿ ದಾಳಿ ನಡೆಸಿತ್ತು. ಹಿರಿಯ ದಲಿತ ರಾಜ್ಯ ನಾಯಕರು ಹಾಗೂ ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಅವರ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ ಇದನ್ನು ಸಮುದಾಯ ತೀರವಾಗಿ ಖಂಡಿಸುತ್ತದೆ. ಯಾವುದೇ ರೀತಿ ಕಪ್ಪು ಚುಕ್ಕೆ ಇಲ್ಲದೆ ಡಾ. ಜಿ ಪರಮೇಶ್ವರ್ ಅವರು ಆಡಳಿತ ಮಾಡಿದ್ದಾರೆ. ಅವರ ಗೌರವಕ್ಕೆ ಧಕ್ಕೆ ತಂದರೆ ನಾವು ಸುಮ್ಮನಿರುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಡಾ. ಜಿ ಪರಮೇಶ್ವರ್ ಯುವ ಸೈನ್ಯದ ವತಿಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಜಿ ಪರಮೇಶ್ವರ್ ಯುವ ಸೈನ್ಯದ ಮೈಸೂರು ಜಿಲ್ಲಾಧ್ಯಕ್ಷ ಸಿ. ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಮುಳ್ಳೂರು ಮಹೇಂದ್ರ ಹಾಜರಿದ್ದರು.





