Mysore
26
broken clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಹೊಸ ತಲೆಮಾರಿನ ಕಲಾವಿದರ ಪ್ರೋತ್ಸಾಹ ಅಗತ್ಯ : ಪ್ರೊ.ಜಯಪ್ರಕಾಶ್‌ಗೌಡ

ಮೈಸೂರು: ಹೊಸ ತಲೆಮಾರಿನ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಕಲೆಯನ್ನು ಉಳಿಸಲು ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಜಯಪ್ರಕಾಶ್‌ಗೌಡ ಹೇಳಿದರು.

ರಂಗಾಯಣದ ಭೂಮಿಗೀತದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ, ಮೈಸೂರು ರಂಗಾಯಣ ಮತ್ತು ಮಹಾರಾಜ ಕಾಲೇಜು ಜಾನಪದ ವಿಭಾಗಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೂಡಲಪಾಯ, ಬಯಲಾಟದ ಹೊಸ ಸಾಧ್ಯತೆಗಳು’ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಂಡ್ಯದ ಕಾಲೇಜಿನಲ್ಲಿ ನಾನು ಪ್ರಾಧ್ಯಾಪಕನಾಗಿದ್ದಾಗ ಜಾನಪದ ಹಾಗೂ ಎಲ್ಲ ಕಲೆಗಳನ್ನು ವಿದ್ಯಾರ್ಥಿ ಗಳಿಗೆ ಕಲಿಸುವ ಕೆಲಸ ಮಾಡಿದ್ದೆ. ಬಳಿಕ ಕಾಲೇಜಿನಲ್ಲಿ ಕಲೆಗಳನ್ನು ಪ್ರದರ್ಶಿಸುವುದಲ್ಲದೇ, ವೃತ್ತಿ ಕಲಾವಿದ ರೊಂದಿಗೆ ಸೇರಿ ಹಳ್ಳಿಗಳಲ್ಲಿ ಕಲೆಗಳನ್ನು ವ್ಯವಸ್ಥಿತವಾಗಿ ಪ್ರದರ್ಶನ ಮಾಡುವ ಕೆಲಸ ಮಾಡುತ್ತಿದ್ದೆವು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದ್ದಲ್ಲಿ ಪರಿಗಣಿಸಬಹುದಾದ ಜಾನಪದದ  ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ,  ಅದರ ಒಳ ಹೊಕ್ಕುವ ಪ್ರಯತ್ನವಾಗಲೀ, ಅದನ್ನು ಮುಂದು ವರಿಸುವ ಕೆಲಸವಾಗಲಿ ಯಾರಿಂದಲೂ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಾನಪದ ಕಲೆಗಳು ಅಳಿವಿನ ಅಂಚಿನ ಹಾದಿ ಹಿಡಿದಿವೆ. ಪ್ರಯೋಗಶೀಲತೆಯಾದಾಗ ಮಾತ್ರ ಯಾವುದೇ ಕಲೆ ಉಳಿಯಲು ಸಾಧ್ಯ. ಒಂದು ತಮಟೆಯ ಶಬ್ಧ ಪ್ರತಿಯೊಬ್ಬರನ್ನೂ ಎಚ್ಚರಿಸುವ ಕೆಲಸ ಮಾಡುತ್ತದೆ. ಕಲೆ ಉಳಿಯಲು ಕೇವಲ ಪಠ್ಯ ಶಿಕ್ಷಣ ಸಾಲದು ಪ್ರಾಯೋಗಿಕ ಶಿಕ್ಷಣ ಬಹಳ ಮುಖ್ಯ. ಅಂತಹ ಕೆಲಸಗಳನ್ನು ಯಾವ ಅಕಾಡೆಮಿಗಳಾಗಲಿ, ವಿಶ್ವವಿದ್ಯಾನಿಲಯಗಳಾಗಲಿ ಮಾಡುತ್ತಿಲ್ಲ ಎಂದು ತಿಳಿಸಿದರು.

ಪ್ರೊ.ಡಿ.ಕೆ.ರಾಜೇಂದ್ರ, ಪ್ರೊ.ನಂಜಯ್ಯ ಹೊಂಗನೂರು, ಡಾ.ಮೈಲಹಳ್ಳಿ ರೇವಣ್ಣ, ಡಿ.ತಿಪ್ಪಣ್ಣ, ಪ್ರೊ. ಎಚ್.ಆರ್.ಚೇತನ, ಪ್ರೊ.ವಿಜಯಲಕ್ಷ್ಮೀ ಮನಾಪುರ, ಮರಿಯಯ್ಯ ಮತ್ತಿತರರು ಉಪಸ್ಥಿತರಿದ್ದರು.

 

 

Tags:
error: Content is protected !!