ನವದೆಹಲಿ: ದೆಹಲಿ ಬಿಜೆಪಿ ಘಟಕ ಬುಧವಾರ ನೇಹಾ ಶಾಲಿನಿ ದುವಾ ಅವರನ್ನು ವಕ್ತಾರೆ ಸ್ಥಾನದಿಂದ ತೆಗೆದುಹಾಕಿದೆ. ಜಿಎಸ್ಟಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಅಧಿಕೃತ ಪಕ್ಷದ ನಿಯಮ ಉಲ್ಲಂಘನೆ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಇದರ ವಿರುದ್ಧ ವಾಗ್ದಾಳಿ ನಡೆಸಿರುವ ದುವಾ ದೆಹಲಿ ಬಿಜೆಪಿ ಘಟಕದ ಕೆಲ ನಾಯಕರು ಪೂರ್ವಗ್ರಹ ಪೀಡಿತರು ಎಂದಿದ್ದು, ತಮ್ಮ ವಿರುದ್ಧದ ಕ್ರಮವನ್ನು ಕೇಂದ್ರದ ವರಿಷ್ಠರು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪದೇ ಪದೇ ಪಕ್ಷದ ರೇಖೆ ಉಲ್ಲಂಘಿಸಿದ್ದಕ್ಕಾಗಿ ನೇಹಾ ಶಾಲಿನಿ ದುವಾ ಅವರನ್ನು ದೆಹಲಿ ಬಿಜೆಪಿ ವಕ್ತಾರೆ ಹುದ್ದೆಯಿಂದ ತಕ್ಷಣವೇ ಬಿಡುಗಡೆ ಮಾಡಿದೆಎಂದು ದೆಹಲಿ ಬಿಜೆಪಿಯ ಮಾಧ್ಯಮ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ.
“ಈ ಹಿಂದೆಯೂ ನೀವು ಪಕ್ಷದ ರೇಖೆಯನ್ನು ಉಲ್ಲಂಘಿಸಿದ್ದೀರಿ. ಇಂದು ಕೂಡಾ ಜಿಎಸ್ಟಿ ಕುರಿತ ವೀಡಿಯೊವನ್ನು ಅಪ್ಲೋಡ್ ಮಾಡಿದ್ದೀರಿ ಅದು ಪಕ್ಷದ ಅಧಿಕೃತ ನಿಲುವಲ್ಲ ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹರ್ಷ್ ಮಲ್ಹೋತ್ರಾ ಅವರು ಬುಧವಾರ ದುವಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ದೆಹಲಿ ಬಿಜೆಪಿ ಅಧ್ಯಕ್ಷರ ಆದೇಶದ ಪ್ರಕಾರ ವಕ್ತಾರೆ ಹುದ್ದೆಯಿಂದ ದುವಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಅವರು ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸಬಹುದು ಪತ್ರದಲ್ಲಿ ಅವರು ಹೇಳಿದ್ದಾರೆ.