ನಂಜನಗೂಡು : ಟಾಟಾ ಏಸ್ ಹಾಲಿನ ವಾಹನ ಪಲ್ಟಿಯಾದ ಪರಿಣಾಮ ಸರ್ಕಾರಿ ಶಾಲಾ ಮಕ್ಕಳಿಗೆ ಗಾಯಗಳಾಗಿದ್ದು, ಈ ಘಟನೆ ಹೆಡಿಯಾಲ ಸಮೀಪ ಈರೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ಮಕ್ಕಳನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ.
ಬೆಳ್ಳಂಬೆಳಿಗ್ಗೆ ಬಳ್ಳೂರು ಹುಂಡಿ, ನಾಗಣಪುರ ಕಾಲೋನಿಯ ಮಾರ್ಗವಾಗಿ ಶಾಲಾ ಮಕ್ಕಳು ಹೆಡಿಯಾಲ ಪ್ರೌಢ ಶಾಲೆಗೆ ತೆರಳುವ ಸಲುವಾಗಿ ನಾಲ್ಕು ಚಕ್ರದ ಟಾಟಾ ಏಸ್ ಹಾಲಿನ ವಾಹನ ಹತ್ತಿದ್ದಾರೆ. ಚಾಲಕನ ನಿರ್ಲಕ್ಷತನಕ್ಕೆ ವಾಹನ ಪಲ್ಟಿಯಾಗಿದ್ದು, ಇದರಲ್ಲಿ ಬಳ್ಳೂರು ಹುಂಡಿ ಗ್ರಾಮದ ಇಬ್ಬರು ಸೇರಿ 9 ಶಾಲಾ ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸಾರ್ವಜನಿಕರು ಆಂಬುಲೆನ್ಸ್ ಮೂಲಕ ಮೈಸೂರಿನ ಕೆಆರ್ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಿದ್ದಾರೆ.
ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟೆ ಹಾಗೂ ದೊಡ್ಡಯ್ಯ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಹನ ಚಾಲಕನ ನಿರ್ಲಕ್ಷತನದಿಂದ ಈ ಅಪಘಾತ ಸಂಭವಿಸಿದ್ದು ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ.





