Mysore
20
overcast clouds
Light
Dark

ಮೈಸೂರು ದಸರಾ ಗಜಪಡೆಗಳ ಶಾರ್ಟ್ ಲಿಸ್ಟ್ ರೆಡಿ

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಮುಖವಾದ ಆಕರ್ಷಣೆ ಅಂದರೆ ಅದು ದಸರಾ ಗಜಪಡೆ. ಜಂಬೂಸವಾರಿ ಮೆರವಣಿಗೆಯಲ್ಲಿ ಗಜಗಾಂಭೀರ್ಯದಿಂದ ಹೆಜ್ಜೆ ಹಾಕುವ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಅಕ್ಟೋಬರ್‌ ೧೨ ರಂದು ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಈಗಾಗಲೇ ೨೦೨೪ ರ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ದಸರಾ ಗಜಪಡೆಗಳ ಶಾರ್ಟ್‌ ಲಿಸ್ಟ್‌ ರೆಡಿಯಾಗಿದೆ.

ಈ ಬಾರಿ ೧೪ ಆನೆಗಳು, ಹೆಚ್ಚುವರಿ ನಾಲ್ಕು ಆನೆ ಸೇರಿದಂತೆ ೧೮ ಆನೆಗಳನ್ನು ಅಂತಿಮಗೊಳಿಸಲು ಉದ್ದೇಶಿಸಲಾಗಿದೆ. ಈ ಆನೆಗಳು ಆಗಸ್ಟ್‌ ೯ ಅಥವಾ ೧೧ ರಂದು ಮೈಸೂರಿಗೆ ಆಗಮಿಸಲಿವೆ. ಮೊದಲ ತಂಡದಲ್ಲಿ ೯ ಆನೆಗಳು ಬರಲಿವೆ.

ಇನ್ನು ರಾಜ್ಯದಾದ್ಯಂತ ಉತ್ತಮವಾದ ಮಳೆಯಾಗಿರುವ ಕಾರಣ ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲು ಚಿಂತನೆ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆನೆಗಳಿಗೆ ಹೆಚ್ಚಿನ ತರಬೇತಿ ನೀಡುವುದಕ್ಕಾಗಿ ೬೦ ದಿನ ಮುಂಚಿತವಾಗಿ ಆನೆಗಳನ್ನ ಮೈಸೂರಿಗೆ ಕರೆದುಕೊಂಡು ಬರಲು ಉದ್ದೇಶಿಸಲಾಗಿದೆ.

ಈಗಾಗಲೇ ನಾಗರಹೊಳೆ  ಅರಣ್ಯ ವ್ಯಾಪ್ತಿಯ ಮತ್ತಿಗೋಡು, ಭೀಮನಕಟ್ಟೆ, ದೊಡ್ಡಹರವೆ, ಕೊಡಗಿನ ದುಬಾರೆ, ಬಂಡೀಪುರದ ರಾಂಪುರ ಕ್ಯಾಂಪ್‌ ಗೆ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್‌ ಬಿಎಂ ಶರಣಬಸಪ್ಪ ನೇತೃತ್ವದ ಅಧಿಕಾರಿಗಳ ತಂಡ ತೆರಳಿ ಒಟ್ಟು ೨೨ ಆನೆಗಳನ್ನ ಪರಿಶೀಲನೆ ಮಾಡಿದ್ದಾರೆ. ಅವುಗಳಲ್ಲಿ ೧೮ ಆನೆಗಳ ಪಟ್ಟಿ ಸಿದ್ದಪಡಿಸಿ ೧೪ಆನೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿವೆ. ಉಳಿದ ೪ ಆನೆಗಳನ್ನ ಕಾಯ್ದಿರಿಸಲಾಗಿದೆ.

ಆಯ್ಕೆಯಾಗಿರುವ ೧೪ ಆನೆಗಳಲ್ಲಿ ಮೊದಲ ತಂಡದಲ್ಲಿ ೯ ಆನೆಗಳನ್ನ ಗಜಪಯಣದ ಮೂಲಕ ಮೈಸೂರಿಗೆ ಕರೆತರಲಾಗುತ್ತಿದೆ. ಮೊದಲ ತಂಡದಲ್ಲಿ ಮತ್ತಿಗೋಡು ಕ್ಯಾಂಪ್‌ ನಿಂದ ಗಜಪಡೆ ನಾಯಕ ಅಭಿಮನ್ಯು, ಭೀಮ, ಹೊಸ ಆನೆ ಏಕಲವ್ಯ, ಭೀಮನಕಟ್ಟೆ ಕ್ಯಾಂಪ್‌ ನಿಂದ ವರಲಕ್ಷ್ಮೀ, ದುಬಾರೆ ಕ್ಯಾಂಪ್‌ ನಿಂದ ಧನಂಜಯ, ಗೋಪಿ, ಕಂಜನ್‌, ರಾಂಪುರ ಕ್ಯಾಂಪ್‌ ನಿಂದ ರೋಹಿತ, ಲಕ್ಷ್ಮೀ  ಆನೆಗಳು ಮೈಸೂರಿಗೆ ಎಂಟ್ರಿ ಕೊಡಲಿವೆ.

ಇನ್ನು ಎರಡನೇ ತಂಡದಲ್ಲಿ ದುಬಾರೆ ಕ್ಯಾಂಪ್‌ ನಿಂದ ಪ್ರಶಾಂತ್‌, ಸುಗ್ರೀವ, ಮತ್ತಿಗೋಡು ಕ್ಯಾಂಪ್‌ ನಿಂದ ಮಹೇಂದ್ರ, ದೊಡ್ಡಹರವೆಯಿಂದ ಲಕ್ಷ್ಮೀ, ರಾಂಪುರ ಕ್ಯಾಂಪ್‌ ನಿಂದ ಹಿರಣ್ಯ ಆನೆಗಳನ್ನ ಮೈಸೂರಿಗೆ ಕರೆದುಕೊಂಡು ಬರಲಾಗುತ್ತದೆ.

ದುಬಾರ್‌ ಕ್ಯಾಂಪ್‌ ನಿಂದ ಅನುಭವಿ ಪ್ರಶಾಂತ್‌, ಅಯ್ಯಪ್ಪ, ರಾಮಾಪುರ ಕ್ಯಾಂಪ್‌ ನಿಂದ ಪಾರ್ಥಸಾರಥಿ, ಹಾಗೂ ಮಾಲಾದೇವಿ ಆನೆಗಳನ್ನ ಆಯ್ಕೆ ಮಾಡಿ ಕಾಯ್ದಿರಿಸಲಾಗಿದೆ.