ಮೈಸೂರು: ಜೀವವಿಮೆ ಹಣ ಪಡೆಯಲು ಅಪ್ಪನನ್ನೇ ಮಗ ಕೊಂದಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಬಳಿಯಿರುವ ಡೋಂಗ್ರಿ ಗೆರಾಸಿಯ ಕಾಲೋನಿಯಲ್ಲಿ ನಡೆದಿದೆ.
ಕಾಲೋನಿ ನಿವಾಸಿ ಅಣ್ಣಪ್ಪ(55)ಕೊಲೆಯಾದವರು. ಅವರ ಪುತ್ರ ಪಾಂಡು ಕೊಲೆ ಆರೋಪಿ. ಪೊಲೀಸರು ಇದೀಗ ಕೊಲೆ ಆರೋಪದ ಮೇರೆಗೆ ಮಗನನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿ.25ರಂದು ಆರೋಪಿಯು ಕರೆ ಮಾಡಿ, ತಂದೆಗೆ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಅರಣ್ಯ ಪ್ರದೇಶದ ಪಕ್ಕದ ರಸ್ತೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಎಂದು ಗೊತ್ತಾಯಿತು. ಅನುಮಾನಸ್ಪಾದವಾಗಿ ವರ್ತಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆಯ ಹೆಸರಿನಲ್ಲಿ ಎಲ್ಐಸಿಯಲ್ಲಿ 30ಲಕ್ಷ ಪಾಲಿಸಿ ಮಾಡಿಸಿದೆ. ಅವರು ಮೃತಪಟ್ಟರೆ ಹಣ ಬರುತ್ತದೆಂಬ ಆಸೆಯಿಂದ, ಹೊಲಕ್ಕೆ ಕರೆದೊಯ್ದು ಕೋಲಿನಿಂದ ತಲೆಗೆ ಹೊಡೆದೆ ಎಂದು ಆರೋಪಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.





