ಮೈಸೂರು : ಕುಡಿಯಲು ಹಣ ನೀಡದ ಹಿನ್ನೆಲೆಯಲ್ಲಿ ಮನೆಗೆ ಬೆಂಕಿ ಹಚ್ಚಿದ ಭೂಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತಾಲ್ಲೂಕಿನ ರಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಹಚ್ಚಿ ಪರಾರಿಯಾಗಿದ್ದ ಭೂಪನನ್ನು ಎನ್.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಪ್ರಸಾದ್(26) ಮನೆಗೆ ಬೆಂಕಿ ಹಚ್ಚಿ ಪೊಲೀಸರ ಅತಿಥಿಯಾದ ಯುವಕನಾಗಿದ್ದಾನೆ. ಹೆತ್ತ ತಾಯಿ ಕಲಾವತಿ ಅವರು ರಮ್ಮನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಪತಿ ಎರಡನೇ ಮದುವೆ ಮಾಡಿಕೊಂಡು ಪ್ರತ್ಯೇಕ ಸಂಸಾರ ನಡೆಸುತ್ತಿದ್ದಾರೆ. ಕಲಾವತಿಗೆ ಇಬ್ಬರು ಮಕ್ಕಳಿದ್ದು, ಅದರಲ್ಲಿ ಎರಡನೇ ಮಗನೇ ಶಿವಪ್ರಸಾದ್ ಕುಡಿತದ ಚಟಕ್ಕೆ ದಾಸನಾಗಿದ್ದ. ಆತ ಆಗಾಗ ತಾಯಿಗೆ ಕಿರುಕುಳ ನೀಡಿ ಹಣ ಕಿತ್ತುಕೊಂಡು ಹೋಗುತ್ತಿದ್ದನು. ಎರಡು ದಿನಗಳ ಹಿಂದೆ ಶಿವಪ್ರಸಾದ್ ಕುಡಿಯಲು ಹಣ ಕೇಳಿದ್ದಾನೆ. ಕಲಾವತಿ ಅವರು ಹಣ ನೀಡುವುದಿಲ್ಲವೆಂದು ನಿರಾಕರಿಸಿದ್ದಾರೆ. ಇದರಿಂದ ಜಗಳ ತೆಗೆದ ಶಿವಪ್ರಸಾದ್ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ. ಮನೆಯಿಂದ ಹೊರಬಂದು ತೆಂಗಿನ ಗರಿಗೆ ಬೆಂಕಿ ಹಚ್ಚಿದ್ದಾನೆ. ಕೆಲ ಸಮಯದಲ್ಲಿ ಪೆಟ್ರೋಲ್ ಸುರಿದು ಬೆಂಕಿ ವ್ಯಾಪಿಸುವಂತೆ ಮಾಡಿ ನಾಪತ್ತೆಯಾಗಿದ್ದಾನೆ. ನೆರೆಹೊರೆಯವರು ಕಲಾವತಿ ಅವರನ್ನು ಮನೆಯಿಂದ ಹೊರ ತಂದು ಬಚಾವ್ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಬೆಂಕಿ ಅನಾಹುತದಿಂದಾಗಿ ಮನೆಯಲ್ಲಿದ್ದ ಪದಾರ್ಥಗಳೆಲ್ಲಾ ನಾಶವಾಗಿದೆ. 60 ಸಾವಿರ ರೂ. ಮೌಲ್ಯದ ಪದಾರ್ಥಗಳು ನಾಶವಾಗಿದೆ. ಈ ಸಂಬಂಧ ಎನ್.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





